ಬೆಂಗಳೂರು: ನಾಯಕ ಪವನ್ ಶೆರಾವತ್ ಮಿಂಚಿನ ದಾಳಿಯಿಂದಾಗಿ ಬೆಂಗಳೂರು ಬುಲ್ಸ್ ತಂಡವು ಜಯದ ‘ಹ್ಯಾಟ್ರಿಕ್’ ಸಾಧಿಸಿತು.
ವೈಟ್ಫೀಲ್ಡ್ನ ಗ್ರ್ಯಾಂಡ್ ಶೆರಟಾನ್ ಹೋಟೆಲ್ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ರೇಡರ್ ಪವನ್ 22 ಅಂಕಗಳನ್ನು ಗಳಿಸಿದರು. ಅದರಿಂದಾಗಿ ಬೆಂಗಳೂರು ತಂಡವು 42–28ರಿಂದ ಹರಿಯಾಣ ಸ್ಟೀಲರ್ಸ್ ವಿರುದ್ಧ ಜಯಭೇರಿ ಬಾರಿಸಿತು.
ಬೆಂಗಳೂರು ತಂಡಕ್ಕೆ ಇದು ಸತತ ಮೂರನೇ ಜಯ. ಮೊದಲ ಪಂದ್ಯದಲ್ಲಿ ತಂಡವು ಸೋಲನುಭವಿಸಿತ್ತು.
ಪವನ್ ಆರಂಭದಿಂದಲೇ ಪಾರಮ್ಯ ಮೆರೆದರು. ಇದರಿಂದಾಗಿ ಬೆಂಗಳೂರು ತಂಡವು ಅರ್ಧವಿರಾಮದ ವೇಳೆಗೆ ಬೆಂಗಳೂರು 19–13ರಿಂದ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಎರಡು ಬಾರಿ ಆಲೌಟ್ ಪಾಯಿಂಟ್ಸ್ ಪಡೆಯಿತು.
ನಂತರದ ಅವಧಿಯಲ್ಲಿಯೂ ಮುನ್ನಡೆಯನ್ನು ಬಿಟ್ಟುಕೊಡಲಿಲ್ಲ. ಹರಿಯಾಣ ತಂಡದ ರಕ್ಷಣಾ ಕೋಟೆಯನ್ನು ಪವನ್ ಛಿದ್ರಗೊಳಿಸಿದರು. ಬುಲ್ಸ್ ಡಿಫೆಂಡರ್ ಮೊಹಿಂದರ್ ಸಿಂಗ್ (4) ಮತ್ತು ಅಮನ್ (3) ಮಿಂಚಿದರು. ಮೊಹಿಂದರ್ ಸಿಂಗ್ ಒಂದು ಬಾರಿ ಹಸಿರು ಕಾರ್ಡ್ ದರ್ಶನ ಕೂಡ ಮಾಡಬೇಕಾಯಿತು.
ಮುಂಬಾ ಜಯಭೇರಿ: ಅಭಿಷೇಕ್ ಸಿಂಗ್ ಮತ್ತು ವಿ. ಅಜಿತ್ ಅವರ ಅಮೋಘ ಆಟದ ನೆರವಿನಿಂದ ಯು ಮುಂಬಾ ತಂಡವು ಜೈಪುರ ಪಿಂಕ್ ಪ್ಯಾಂಥರ್ಸ್ ಎದುರು ಗೆದ್ದಿತು.
ದಿನದ ಮೊದಲ ಪಂದ್ಯದಲ್ಲಿ ಮುಂಬಾ ತಂಡವು 37–28 ರಿಂದ ಪಿಂಕ್ ಪ್ಯಾಂಥರ್ಸ್ ವಿರುದ್ಧ ಜಯಿಸಿತು.
ಚುರುಕಿನ ದಾಳಿ ನಡೆಸಿದ ಅಭಿಷೇಕ್ (10) ಮತ್ತು ಅಜಿತ್ (11) ತಂಡದ ಗೆಲುವಿನ ರೂವಾರಿಗಳಾದರು.
ಆರಂಭದಿಂದಲೇ ಮುಂಬಾ ತಂಡವು ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಪ್ರಥಮಾರ್ಧದ ವೇಳೆಗೆ 21–12ರಿಂದ ಮುನ್ನಡೆಯನ್ನೂ ಸಾಧಿಸಿತು. ವಿರಾಮದ ನಂತರ ಪ್ಯಾಂಥರ್ಸ್ ತಂಡದ ಆಟಗಾರರು ಕಠಿಣ ಪೈಪೋಟಿಯೊಡ್ಡಿದರು.
ಇದರಿಂದಾಗಿ ಈ ಅವಧಿಯಲ್ಲಿ ಉಭಯ ತಂಡಗಳು 16–16ರಿಂದ ಸಮಬಲ ಸಾಧಿಸಿದವು. ಆದರೆ, ಮೊದಲ ಅವಧಿಯಲ್ಲಿ ಮುನ್ನಡೆ ಸಾಧಿಸಿದ್ದ ಮುಂಬಾ ಜಯಿಸಿತು. ಪ್ಯಾಂಥರ್ಸ್ ತಂಡದ ಅರ್ಜುನ್ ದೇಶ್ವಾಲ್ 14 ಅಂಕಗಳನ್ನು ಗಳಿಸಿದರು. ನಾಯಕ, ಆಲ್ರೌಂಡರ್ ದೀಪಕ್ ಹೂಡಾ ನಾಲ್ಕು ಅಂಕ ಗಳಿಸಿದರು.
ಟೂರ್ನಿಯಲ್ಲಿ ಮುಂಬಾ ತಂಡಕ್ಕೆ ಇದು ಎರಡನೇ ಜಯವಾಗಿದೆ. ಒಂದರಲ್ಲಿ ಸೋತು ಮತ್ತೊಂದರಲ್ಲಿ ಟೈ ಮಾಡಿಕೊಂಡಿದೆ.