ಕೋಲ್ಕತ್ತ: ಕನ್ನಡಿಗ ಪ್ರಶಾಂತಕುಮಾರ್ ರೈ ಅವರ ಅಮೋಘ ಆಟದ ಬಲದಿಂದ ಯು.ಪಿ. ಯೋಧಾ ತಂಡವು ಶನಿವಾರ ಪ್ರೊ ಕಬಡ್ಡಿ ಪಂದ್ಯದಲ್ಲಿ ಜಯಿಸಿತು.
ನೇತಾಜಿ ಸುಭಾಸ್ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯೋಧಾ ತಂಡವು 34–32 ರಿಂದ ಯು ಮುಂಬಾ ಎದುರು ರೋಚಕ ಜಯ ಸಾಧಿಸಿತು.
ಉತ್ತಮ ದಾಳಿ ನಡೆಸಿದ ಪ್ರಶಾಂತ್ ಒಟ್ಟು ಎಂಟು ಪಾಯಿಂಟ್ಸ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಅವರಿಗೆ ಇನ್ನೊಬ್ಬ ಕನ್ನಡಿಗ ರಿಶಾಂಕ್ ದೇವಾಡಿಗ ಅವರು ಉತ್ತಮ ಜೊತೆ ನೀಡಿದರು. ಅವರು ಏಳು ಪಾಯಿಂಟ್ಸ್ ಸಂಗ್ರಹಿಸಿದರು. ಸಚಿನ್ ಕುಮಾರ್ ಅವರು ಟ್ಯಾಕಲ್ನಲ್ಲಿ ಆರು, ರೇಡಿಂಗ್ನಲ್ಲಿ ಒಂದು ಪಾಯಿಂಟ್ ಗಳಿಸಿದರು.
ಯು ಮುಂಬಾ ತಂಡವೂ ಸೋಲು ತಪ್ಪಿಸಿಕೊಳ್ಳಲು ಹರಸಾಹಸಪಟ್ಟಿತು. ರೋಹಿತ್ ಬಲಿಯಾನ್ ರೇಡಿಂಗ್ನಲ್ಲಿ ಎಂಟು, ಟ್ಯಾಕಲ್ನಲ್ಲಿ ಒಂದು, ಬೋನಸ್ ಒಂದು ಅಂಕ ಗಳಿಸಿ ಮಿಂಚಿದರು. ಅಬೋತಾಜಿ ಅವರು ಐದು ಅಂಕ ಗಳಿಸಿದರು ಸುರೀಂದರ್ ಟ್ಯಾಕಲ್ನಲ್ಲಿ ಮಿಂಚಿದರು.