ಬೆಂಗಳೂರು: ಅಮೋಘ ಆಟ ಆಡಿದ ಸಮ್ಯಕ್ ಕಶ್ಯಪ್ ಮತ್ತು ಜಿ.ಯಶಸ್ವಿನಿ ಅವರು ಎಂ.ಎಸ್.ರಾಮಯ್ಯ ಸ್ಮಾರಕ ರಾಜ್ಯ ಓಪನ್ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಸಬ್ಜೂನಿಯರ್ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
ಮಲ್ಲೇಶ್ವರ ಸಂಸ್ಥೆಯ ಅಂಗಳದಲ್ಲಿ ಸೋಮವಾರ ನಡೆದ ಬಾಲಕರ ವಿಭಾಗದ ಫೈನಲ್ನಲ್ಲಿ ಸಮ್ಯಕ್ 11–9, 11–9, 9–11, 11–6ರಲ್ಲಿ ಶ್ರೀಕಾಂತ್ ಕಶ್ಯಪ್ ವಿರುದ್ಧ ಗೆದ್ದರು.
ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್ ಪಂದ್ಯಗಳಲ್ಲಿ ಸಮ್ಯಕ್ 13–11, 8–11, 11–9, 5–11, 11–7ರಲ್ಲಿ ಕೆ.ಜೆ.ಆಕಾಶ್ ಎದುರೂ, ಶ್ರೀಕಾಂತ್ 9–11, 11–9, 11–8, 12–10ರಲ್ಲಿ ಸುಜನ್ ಭಾರದ್ವಾಜ್ ಮೇಲೂ ಗೆದ್ದಿದ್ದರು.
ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಯಶಸ್ವಿನಿ 9–11, 11–8, 11–9, 12–14, 11–9ರಲ್ಲಿ ಜಿ.ಕರುಣಾ ಎದುರು ವಿಜಯಿಯಾದರು.
ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಕರುಣಾ 11–6, 11–5, 11–6ರಲ್ಲಿ ತೃಪ್ತಿ ಪುರೋಹಿತ್ ಎದುರೂ, ಯಶಸ್ವಿನಿ 11–6, 11–8, 11–5ರಲ್ಲಿ ಸಹನಾ ಎಚ್ ಮೂರ್ತಿ ಮೇಲೂ ಗೆದ್ದಿದ್ದರು.
ಮಿನಿ ಕೆಡೆಟ್ ಬಾಲಕರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಮೊಹನೀಶ್ ನಾರಾ ಅವರ ಪಾಲಾಯಿತು.
ಫೈನಲ್ನಲ್ಲಿ ಮೊಹನೀಶ್ 13–11, 11–6, 13–11ರಲ್ಲಿ ತೇಶುಭ್ ದಿನೇಶ್ ಅವರನ್ನು ಸೋಲಿಸಿದರು.