ಒಸ್ಲೊ, ನಾರ್ವೆ: ಭಾರತದ ರವಿಂದರ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಕಂಚಿ ಪದಕದ ಸುತ್ತಿಗೆ ಪ್ರವೇಶಿಸಿದ್ದಾರೆ. ಇನ್ನುಳಿದ ಪೈಲ್ವಾನರಿಗೆ ಪ್ರೀಕ್ವಾರ್ಟರ್ಫೈನಲ್ನಿಂದ ಮುಂದೆ ಸಾಗಲಾಗಲಿಲ್ಲ.
ಶನಿವಾರ ಕ್ವಾರ್ಟರ್ಫೈನಲ್ನಲ್ಲಿ ಸೋತಿದ್ದ ರವಿಂದರ್ ಅವರು ರಿಪೇಜ್ ಸುತ್ತಿನಲ್ಲಿ ಆಡುವ ಅವಕಾಶ ಗಳಿಸಿದ್ದರು. 61 ಕೆಜಿ ವಿಭಾಗದ ಈ ಬೌಟ್ನಲ್ಲಿ ಅವರು ಬಲ್ಗೇರಿಯಾದ ಜಾರ್ಜಿ ವ್ಯಾಲೆಂಟಿನೊವ್ ವಂಗೆಲೊವ್ ಅವರನ್ನು ಮಣಿಸಿದರು.
ರವಿಂದರ್ ಮತ್ತು ಜಾರ್ಜಿ ನಡುವಣ ಈ ಸೆಣಸಾಟವು ಟೋಕಿಯೊ ಒಲಿಂಪಿಕ್ಸ್ನಲ್ಲಿ ರವಿ ದಹಿಯಾ ಆಡಿದ ಬೌಟ್ಅನ್ನು ನೆನಪಿಸಿತು. ಒಂದು ಹಂತದಲ್ಲಿ 0–8ರಿಂದ ಹಿನ್ನಡೆಯಲ್ಲಿದ್ದ ರವಿಂದರ್ ‘ಸಿಂಗಲ್ ಲೆಗ್ ಅಟ್ಯಾಕ್‘ ನಡೆಯ ಮೂಲಕ ಎದುರಾಳಿಯನ್ನು ಮಣಿಸಿದರು. ‘ವಿಕ್ಟರಿ ಬೈ ಫಾಲ್‘ ನಿಯಮದನ್ವಯ ಭಾರತದ ಪೈಲ್ವಾನಗೆ ಜಯ ಒಲಿಯಿತು.
ಕಂಚಿನ ಪದಕದ ಸುತ್ತಿನಲ್ಲಿ ಅವರು ಆರ್ಮೇನಿಯಾದ ಅರ್ಸೆನ್ ಹರುತ್ಯಾನನ್ ಅವರನ್ನು ಎದುರಿಸಲಿದ್ದಾರೆ.
ಭಾರತದ ಇನ್ನುಳಿ ಸ್ಪರ್ಧಿಗಳಾದ ಪಂಕಜ್ ಮಲಿಕ್ (57 ಕೆಜಿ ವಿಭಾಗ), ರೋಹಿತ್ (65 ಕೆಜಿ), ಪೃಥ್ವಿರಾಜ್ ಪಾಟೀಲ್ (95 ಕೆಜಿ) ಅವರು ಪ್ರೀಕ್ವಾರ್ಟರ್ಫೈನಲ್ಗಳಲ್ಲಿ ಸೋತರು.