ನವದೆಹಲಿ:ಸ್ಫೋಟಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ, ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಕುಸ್ತಿಪಟು ವಿನೇಶಾ ಪೋಗಟ್, ಪ್ಯಾರಾಲಿಂಪಿಯನ್ ಮರಿಯಪ್ಪನ್ ತಂಗವೇಲು ಮತ್ತು ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಅವರಿಗೆ ಖೇಲ್ ರತ್ನ ಪ್ರಶಸ್ತಿ ಖಚಿತವಾಗಿದೆ.
ವಿವಿಧ ಕ್ರೀಡಾ ಪ್ರಶಸ್ತಿಗಳಿಗೆ ಆಯ್ಕೆಯಾದವರ ಪಟ್ಟಿಯನ್ನು ಕೇಂದ್ರ ಕ್ರೀಡಾ ಇಲಾಖೆ ಶುಕ್ರವಾರ ಸಂಜೆ ಬಿಡುಗಡೆ ಮಾಡಿದ್ದು ಈ ಹಿಂದೆ ಅತ್ಯುನ್ನತ ಗೌರವವಾದ ಖೇಲ್ ರತ್ನ ಪ್ರಶಸ್ತಿ ಗಳಿಸಿದ್ದ ಕುಸ್ತಿಪಟು ಸಾಕ್ಷಿ ಮಲಿಕ್ ಮತ್ತು ವೇಟ್ಲಿಫ್ಟರ್ ಮೀರಾಬಾಯಿ ಚಾನು ಅವರ ಹೆಸರನ್ನು ಅರ್ಜುನ ಪ್ರಶಸ್ತಿ ಪಟ್ಟಿಯಿಂದ ಕೈಬಿಡಲಾಗಿದೆ. ನ್ಯಾಯಮೂರ್ತಿ ಮುಕುಂದಕಂ ಶರ್ಮಾ ನೇತೃತ್ವದ ಸಮಿತಿಯು ಕಳೆದ ವಾರ ಅರ್ಜುನ ಪ್ರಶಸ್ತಿಗೆ 29 ಮಂದಿಯ ಹೆಸರನ್ನು ಶಿಫಾರಸು ಮಾಡಿತ್ತು. ಆದರೆ 27 ಮಂದಿಗೆ ಮಾತ್ರ ಪ್ರಶಸ್ತಿ ನೀಡಲು ಇಲಾಖೆ ನಿರ್ಧರಿಸಿದೆ.
ನಾಲ್ಕು ವರ್ಷಗಳಲ್ಲಿ ಕ್ರೀಡಾಪಟುಗಳು ಮಾಡಿರುವ ಸಾಧನೆಯ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದವರಿಗೆ ಶೇಕಡಾ 80ರಷ್ಟು ಆದ್ಯತೆ ನೀಡಿದ್ದು ಉಳಿದ ಶೇಕಡಾ 20 ಅನ್ನು ಆಯ್ಕೆ ಸಮಿತಿಯ ವಿವೇಚನೆಗೆ ಬಿಡಲಾಗಿತ್ತು. ಮಣಿಕಾ ಬಾತ್ರಾ ಅವರು 2018ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅಮೋಘ ಸಾಮರ್ಥ್ಯ ತೋರಿದ್ದರು. ಹೀಗಾಗಿ ಅವರಿಗೆ ಅರ್ಜುನ ಪ್ರಶಸ್ತಿ ನೀಡಲಾಗಿತ್ತು. ಆದರೆ ನಂತರ ಯಾವ ಕೂಟದಲ್ಲೂ ನಿರೀಕ್ಷೆಗೆ ತಕ್ಕ ಸಾಧನೆ ಮಾಡಿರಲಿಲ್ಲ. ರ್ಯಾಂಕಿಂಗ್ನಲ್ಲಿ ಕುಸಿತ ಕಂಡು 63ಕ್ಕೆ ಇಳಿದಿದ್ದರು. ಆದ್ದರಿಂದ ಖೇಲ್ರತ್ನ ಪ್ರಶಸ್ತಿಗೆ ಪರಿಗಣಿಸುವ ಬಗ್ಗೆ ಸಂದೇಹ ಇತ್ತು.
2018ರ ಏಷ್ಯನ್ ಗೇಮ್ಸ್ನಲ್ಲಿ ತಂಡವನ್ನು ಫೈನಲ್ ವರೆಗೆ ತಲುಪಿಸಿದ, ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಳಿಸುವಂತೆ ಮಾಡಿದ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅವರಿಗೆ ಖೇಲ್ ರತ್ನ ನೀಡುವ ಕುರಿತು ಕೂಡ ಸಂದೇಹಗಳು ಇದ್ದವು. ಆದರೆ ಕ್ರೀಡಾ ಇಲಾಖೆ ಇವರಿಬ್ಬರನ್ನು ಪಟ್ಟಿಯಿಂದ ಕೈಬಿಡದೆ ಇರಲು ನಿರ್ಧರಿಸಿತು. ಚಳಿಗಾಲದ ಒಲಿಂಪಿಕ್ಸ್ನ ವಿಂಟರ್ ಸ್ಪೋರ್ಟ್ಸ್ನಲ್ಲಿ 1998ರಿಂದ 2018ರ ವರೆಗೆ ಭಾರತವನ್ನು ಪ್ರತಿನಿಧಿಸಿದ ಶಿವ ಕೇಶವನ್ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದ್ದಕ್ಕೆ ಇಲಾಖೆ ಸಂತಸ ವ್ಯಕ್ತಪಡಿಸಿದೆ. ಅರ್ಜುನ ಪ್ರಶಸ್ತಿಯಲ್ಲಿ ವೈಯಕ್ತಿಕ ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಆದ್ಯತೆ ನೀಡಲಾಗುವುದು ಎಂದು ಇಲಾಖೆ ಹೇಳಿದ್ದರೂ ಕೊಕ್ಕೊ ಆಟಗಾರ ಸುಧಾಕರ್ ಕಾಳೆ ಅವರ ಹೆಸರು ಪಟ್ಟಿಯಲ್ಲಿದೆ.
ಪ್ರಶಸ್ತಿಗೆ ಆಯ್ಕೆಯಾದವರು: ರಾಜೀವ್ ಗಾಂಧಿ ಖೇಲ್ರತ್ನ: ರೋಹಿತ್ ಶರ್ಮಾ (ಕ್ರಿಕೆಟ್), ಮರಿಯಪ್ಪನ್ ತಂಗವೇಲು (ಪ್ಯಾರಾ ಅಥ್ಲೀಟ್), ಮಣಿಕಾ ಬಾತ್ರ (ಟೇಬಲ್ ಟೆನಿಸ್), ವಿನೇಶಾ ಪೋಗಟ್ (ಕುಸ್ತಿ), ರಾಣಿ ರಾಂಪಾಲ್ (ಹಾಕಿ).
ದ್ರೋಣಾಚಾರ್ಯ (ಜೀವಮಾನ ಸಾಧನೆ ವಿಭಾಗ): ಧರ್ಮೇಂದ್ರ ತಿವಾರಿ (ಆರ್ಚರಿ), ಪುರುಷೋತ್ತಮ ರೈ (ಅಥ್ಲೆಟಿಕ್ಸ್), ಶಿವ ಸಿಂಗ್ (ಬಾಕ್ಸಿಂಗ್), ರಮೇಶ್ ಪಠಾಣಿಯಾ (ಹಾಕಿ), ಕೃಷ್ಣ ಕುಮರ್ ಹೂಡಾ (ಕಬಡ್ಡಿ), ವಿಜಯ ಬಾಲಚಂದ್ರ ಮುನೀಶ್ವರ್ (ಪ್ಯಾರಾ ಪವರ್ಲಿಫ್ಟಿಂಗ್), ನರೇಶ್ ಕುಮಾರ್ (ಟೆನಿಸ್), ಓಂ ಪ್ರಕಾಶ್ ದಹಿಯಾ (ಕುಸ್ತಿ); ಸಾಮಾನ್ಯ ವಿಭಾಗ: ಜೂಡ್ ಫೆಲಿಕ್ಸ್ (ಹಾಕಿ), ಯೋಗೇಶ್ ಮಾಳವಿಯಾ (ಮಲ್ಲಕಂಬ), ಜಸ್ಪಾಲ್ ರಾಣಾ (ಶೂಟಿಂಗ್), ಕುಲದೀಪ್ ಕುಮಾರ್ ಹಂಡೂ (ವುಷು), ಗೌರವ್ ಖನ್ನ (ಪ್ಯಾರಾ ಬ್ಯಾಡ್ಮಿಂಟನ್).
Cricketer Rohit Sharma, para-athlete Mariappan Thangavelu, table tennis champion Manika Batra, wrestler Vinesh Phogat & hockey player Rani to get Rajiv Gandhi Khel Ratna Award. pic.twitter.com/WwUOrGXqfT
— ANI (@ANI) August 21, 2020
ಅರ್ಜುನ: ಅತನು ದಾಸ್ (ಆರ್ಚರಿ), ದ್ಯುತಿ ಚಾಂದ್ (ಅಥ್ಲೆಟಿಕ್ಸ್), ಸಾತ್ವಿಕ್ ಸಾಯಿರಾಜ್ ರಣಕಿ ರೆಡ್ಡಿ–ಚಿರಾಗ್ ಶೆಟ್ಟಿ(ಬ್ಯಾಡ್ಮಿಂಟನ್), ವಿಶೇಷ್ ಭೃಗುವಂಶಿ (ಬ್ಯಾಸ್ಕೆಟ್ಬಾಲ್), ಮನೀಶ್ ಕೌಶಿಕ್ (ಬಾಕ್ಸಿಂಗ್), ಲವ್ಲಿನಾ ಬೋರ್ಗೊಹೇನ್ (ಬಾಕ್ಸಿಂಗ್), ಇಶಾಂತ್ ಶರ್ಮಾ, ದೀಪ್ತಿ ಶರ್ಮಾ (ಕ್ರಿಕೆಟ್), ಸಾವಂತ್ ಅಜಯ್ (ಈಕ್ವೆಸ್ಟ್ರಿಯನ್), ಸಂದೇಶ್ ಜಿಂಗಾನ್ (ಫುಟ್ಬಾಲ್), ಅದಿತಿ ಅಶೋಕ್ (ಗಾಲ್ಫ್), ಆಕಾಶ್ ದೀಪ್ ಸಿಂಗ್, ದೋಪಿಕಾ (ಹಾಕಿ), ದೀಪಕ್ (ಕಬಡ್ಡಿ), ಸುಧಾಕರ್ ಕಾಳೆ (ಕೊಕ್ಕೊ), ದತ್ತು ಭೋಕನಾಳ್ (ರೋಯಿಂಗ್), ಮನು ಭಾಕರ್, ಸೌರಭ್ ಚೌಧರಿ (ಶೂಟಿಂಗ್), ಮಧುರಿಕಾ ಸುಹಾಸ್ (ಟೇಬಲ್ ಟೆನಿಸ್), ದಿವಿಜ್ ಶರಣ್ (ಟೆನಿಸ್), ಶಿವ ಕೇಶವನ್ (ವಿಂಟರ್ ಸ್ಪೋರ್ಟ್ಸ್), ದಿವ್ಯಾ ಕಕ್ರಾನ್ (ಕುಸ್ತಿ), ರಾಹುಲ್ ಆವಾರೆ (ಕುಸ್ತಿ), ಸುಯಶ್ ನಾರಾಯಣ್ ಜಾಧವ್ (ಪ್ಯಾರಾ ಈಜು). ಸಂದೀಪ್ (ಅಥ್ಲೆಟಿಕ್ಸ್), ಮನೀಶ್ ನರ್ವಾಲ್ (ಶೂಟಿಂಗ್).
Cricketers Ishant Sharma and Deepti Sharma, athlete Dutee Chand, shooter Manu Bhaker among 27 sportspersons to be conferred with Arjuna Award. https://t.co/X2d7SNSc7j
— ANI (@ANI) August 21, 2020
ಧ್ಯಾನ್ಚಂದ್: ಕುಲದೀಪ್ ಸಿಂಗ್ ಭುಲ್ಲರ್, ಜಿನ್ಸಿ ಫಿಲಿಪ್ (ಅಥ್ಲೆಟಿಕ್ಸ್), ಪ್ರದೀಪ್ ಗಂಧೆ, ತೃಪ್ತಿ ಮುರ್ಗುಂಡೆ (ಬ್ಯಾಡ್ಮಿಂಟನ್), ಎನ್.ಉಷಾ, ಲಖಾ ಸಿಂಗ್ (ಬಾಕ್ಸಿಂಗ್), ಸುಖ್ವೀರೇಂದರ್ ಸಿಂಗ್ ಸಂಧು (ಫುಟ್ಬಾಲ್), ಅಜಿತ್ ಸಿಂಗ್ (ಹಾಕಿ), ಮನ್ಪ್ರೀತ್ ಸಿಂಗ್ (ಕಬಡ್ಡಿ), ರಂಜಿತ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್), ಸತ್ಯಪ್ರಕಾಶ್ ತಿವಾರಿ (ಪ್ಯಾರಾ ಬ್ಯಾಡ್ಮಿಂಟನ್), ಮನಜೀತ್ ಸಿಂಗ್ (ರೋಯಿಂಗ್), ಸಚಿನ್ ನಾಗ್ (ಈಜು), ನಂದನ್ ಬಾಲ್ (ಟೆನಿಸ್), ನೇತರ್ಪಾಲ್ ಹೂಡಾ (ಕುಸ್ತಿ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.