ಬ್ಯಾಂಕಾಕ್ (ಪಿಟಿಐ): ಭಾರತದ ಅನುಭವಿ ಆಟಗಾರರಾದ ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್,ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಅನಿರೀಕ್ಷಿತ ಸೋಲಿನೊಡನೆ ನಿರ್ಗಮಿಸಿದರು. ಆದರೆ ಬಿ.ಸಾಯಿಪ್ರಣೀತ್, ಪುರುಷರ ಸಿಂಗಲ್ಸ್ನಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದರು.
ಎರಡು ತಿಂಗಳ ವಿಶ್ರಾಂತಿಯ ನಂತರ ಕೋರ್ಟ್ಗಿಳಿದಿದ್ದ ಸೈನಾ, ಬುಧವಾರ ನಡೆದ ಪಂದ್ಯದಲ್ಲಿ 21–16, 11–21, 14–21 ರಲ್ಲಿ ನೇರ ಗೇಮ್ಗಳಿಂದ ಶ್ರೇಯಾಂಕರಹಿತ ಆಟಗಾರ್ತಿ ಸಯಾಕಾ ಟಾಕಾಹಶಿ ಎದುರು ಸೋಲನುಭವಿಸಿದರು. ಏಳನೇ ಶ್ರೇಯಾಂಕದ ಸೈನಾ 48 ನಿಮಿಷಗಳಲ್ಲಿ ಜಪಾನ್ ಆಟಗಾರ್ತಿಗೆ ಮಣಿದರು.
ಕೊನೆಯ ಗಳಿಗೆಯಲ್ಲಿ ಭಾರತದ ಅಗ್ರಮಾನ್ಯ ಆಟಗಾರ್ತಿ ಪಿ.ವಿ.ಸಿಂಧು ಈ ಟೂರ್ನಿಯಿಂದ ಹಿಂದೆಸರಿದಿದ್ದರು. ಸೈನಾ ನಿರ್ಗಮನದೊಡನೆ ಮಹಿಳಾ ಸಿಂಗಲ್ಸ್ನಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.
ಐದನೇ ಶ್ರೇಯಾಂಕದ ಶ್ರೀಕಾಂತ್ ಕೂಡ ಮೊದಲ ಗೇಮ್ ಗೆದ್ದರೂ ನಂತರ ಸೋಲನುಭವಿಸಿದರು. ಪುರುಷರ ಸಿಂಗಲ್ಸ್ ಎರಡನೇ ಸುತ್ತಿನಲ್ಲಿ, ಸ್ಥಳೀಯ ಆಟಗಾರ ಖೋಸಿಟ್ ಫೆಟ್ಪ್ರದಾಬ್ 11–21, 21–16, 21–12ರಲ್ಲಿ ಶ್ರೀಕಾಂತ್ ಅವರನ್ನು ಹಿಮ್ಮೆಟ್ಟಿಸಿದರು.
ಭಾರತಕ್ಕೆ, ಗುರುವಾರ ಅಂಥ ಒಳ್ಳೆಯ ದಿನವಾಗಿ ಪರಿಣಮಿಸಲಿಲ್ಲ. ಶ್ರೇಯಾಂಕರಹಿತ ಆಟಗಾರ ಪರುಪಳ್ಳಿ ಕಶ್ಯಪ್ ಕೂಡ ನೇರ ಗೇಮ್ಗಳಲ್ಲಿ, 9–21, 14–21ರಲ್ಲಿ ಚೀನಾ ತೈಪಿಯ ಚೌ ಟಿಯನ್ ಚೆನ್ ಎದುರು ಸೋತರು. ತೈಪಿಯ ಆಟಗಾರ ಕೇವಲ 33 ನಿಮಿಷಗಳಲ್ಲಿ ಪಂದ್ಯ ಗೆದ್ದರು.
ಸಾಯಿಪ್ರಣೀತ್ಗೆ ಜಯ:ಕಳೆದ ವಾರ ಜಪಾನ್ ಓಪನ್ ಸೆಮಿಫೈನಲ್ ಪ್ರವೇಶಿಸಿದ್ದ ಸಾಯಿ ಪ್ರಣೀತ್ ಬ್ಯಾಂಕಾಕ್ನಲ್ಲೂ ಯಶಸ್ಸಿನ ಓಟ ಮುಂದುವರಿಸಿದ್ದಾರೆ. ಪ್ರಿಕ್ವಾರ್ಟರ್ಫೈನಲ್ನಲ್ಲಿ ಅವರು 21–18, 21–19ರಲ್ಲಿ ಸ್ವದೇಶದ ಶುಭಂಕರ್ ಡೇ ವಿರುದ್ಧ ಜಯಗಳಿಸಿದರು.
ಸಾಯಿಪ್ರಣೀತ್ ಕ್ವಾರ್ಟರ್ಫೈನಲ್ನಲ್ಲಿ ಏಳನೇಶ್ರೇಯಾಂಕದ ಕಂಥಾ ಸುನೆಯಾಮಾ (ಜಪಾನ್) ಅವರನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ಭಾರತದ ಸಾತ್ವಿಕ್ರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಎಂಟರ ಘಟ್ಟಕ್ಕೆ ಮುನ್ನಡೆಯಿತು. ಇವರಿಬ್ಬರು 21–17, 21–19 ರಿಂದ ಇಂಡೊನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮೊಹಮ್ಮದ್ ರಿಯಾನ್ ಆರ್ಡಿಯಾಂಟೊ ಜೋಡಿಯನ್ನು ಸೋಲಿಸಿದರು.
ಭಾರತದ ಆಟಗಾರರು ಶುಕ್ರವಾರ ನಡೆಯುವ ಕ್ವಾರ್ಟರ್ಫೈನಲ್ನಲ್ಲಿ ಅರ್ಹತಾ ಸುತ್ತಿನಿಂದ ತೇರ್ಗಡೆಯಾಗಿದ್ದ ದಕ್ಷಿಣ ಕೊರಿಯಾದ ಚೊಯ್ ಸೊಲ್ಗ್ಯು– ಸಿಯೊ ಸಿಯುಂಗ್ ಜೇ ಜೋಡಿಯ ವಿರುದ್ಧ ಆಡಲಿದ್ದಾರೆ.
ಮಿಕ್ಸೆಡ್ ಡಬಲ್ಸ್ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಪ್ರಣಾವ್ ಜೆರ್ರಿ ಮತ್ತು ಎನ್.ಸಿಕ್ಕಿ ರೆಡ್ಡಿ 16–21, 11–21ರಲ್ಲಿ ಎಂಟನೇ ಶ್ರೇಯಾಂಕದ ಟಾಂಗ್ ಚುನ್ ಮನ್ ಮತ್ತು ತ್ಸೆ ಯಿಂಗ್ ಸುಯೆತ್ (ಹಾಂಗ್ಕಾಂಗ್) ಅವರಿಗೆ ಮಣಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.