ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಪಂದ್ಯದ ಬಗ್ಗೆಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಜಾಹೀರಾತು ಕುರಿತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಾಲಾಕೋಟ್ ಏರ್ ಸ್ಟ್ರೈಕ್ ಸಂದರ್ಭದಲ್ಲಿ ಪಾಕ್ ಸೇನೆಯಿಂದ ಬಂಧಿತರಾಗಿದ್ದ ಭಾರತದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಅಣಕು ಮಾಡುವಂತಹ ಪಾತ್ರಧಾರಿಯೊಬ್ಬ ಇರುವ ಜಾಹೀರಾತನ್ನು ಪಾಕಿಸ್ತಾನದ ಜಾಜ್ ಟಿವಿ ಬಿತ್ತರಿಸಿತ್ತು.
ಸ್ಟಾರ್ ಟಿವಿಯಲ್ಲಿ ಪಾಕಿಸ್ತಾನವು ಭಾರತಕ್ಕೆ ಸೋಲುವಂತಹ ಸನ್ನಿವೇಶದ ಜಾಹೀರಾತು ಪ್ರಸಾರ ಮಾಡಿದೆ. ಇವುಗಳನ್ನು ಸಾನಿಯಾ ಟೀಕೆ ಮಾಡಿದೆ.
‘ಗಡಿ ಎರಡೂ ಬದಿಯಿಂದ ಪ್ರಸಾರವಾಗುತ್ತಿರುವ ಜಾಹೀರಾತುಗಳು ಚೆನ್ನಾಗಿಲ್ಲ. ಈ ಪಂದ್ಯದ ಸುತ್ತ ಬಹಳಷ್ಟು ನಿರೀಕ್ಷೆಗಳು ಈಗಾಗಲೇ ಗರಿಗೆದರಿವೆ. ಇದು ಕ್ರಿಕೆಟ್ ಅಷ್ಟ್ರೆ. ಅದನ್ನು ಅದೇ ರೀತಿ ನೋಡಿ’ ಎಂದು ಸಾನಿಯಾ ಟ್ವೀಟ್ ಮಾಡಿದ್ದಾರೆ.