ನವದೆಹಲಿ: ಉದಯೋನ್ಮುಖ ಆಟಗಾರರಾದ ಆಕರ್ಷಿಣಿ ಕಶ್ಯಪ್ ಮತ್ತು ಕಿರಣ್ ಜಾರ್ಜ್ ಅವರು ಅಖಿಲ ಭಾರತ ಸೀನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪರುಷರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.
ವಿಜಯವಾಡದಲ್ಲಿ ಭಾನುವಾರ ಮುಕ್ತಾಯಗೊಂಡ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಮೂರನೇ ಶ್ರೇಯಾಂಕದ ಆಕರ್ಷಿಣಿ ಏಳನೇ ಶ್ರೇಯಾಂಕದ ಅನುರಾ ಪ್ರಭು ದೇಸಾಯಿ ಅವರನ್ನು 21–12, 21–16ರಲ್ಲಿ ಮಣಿಸಿದರು.
ಪುರುಷರ ವಿಭಾಗದ ಫೈನಲ್ನಲ್ಲಿ ಕಿರಣ್ 21–9, 15–21, 21–11ರಲ್ಲಿ ಸಿರಿಲ್ ವರ್ಮಾ ಎದುರು ಗೆಲುವು ಸಾಧಿಸಿದರು.
ಎರಡು ವರ್ಷ ಪ್ರಶಸ್ತಿ ಬರ ಅನುಭವಿಸಿದ್ದ ಕಿರಣ್ಗೆ ಈ ವರ್ಷ ಇದು ಸತತ ಎರಡನೇ ಪ್ರಶಸ್ತಿಯಾಗಿದೆ.
‘ಇದು ಮಹತ್ವದ ಗೆಲುವು. ವರ್ಷದಲ್ಲಿ ಗಳಿಸಿದ ಎರಡು ಪ್ರಶಸ್ತಿಗಳಿಂದಾಗಿ ನನ್ನ ಆತ್ವವಿಶ್ವಾಸ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡುವ ಹುಮ್ಮಸ್ಸು ಬಂದಿದೆ’ ಎಂದು ಕಿರಣ್ ಹೇಳಿದರು.
ಮನೀಷಾ–ಋತುಪರ್ಣಾಗೆ ಜಯ: ಮಹಿಳೆಯರ ಡಬಲ್ಸ್ ವಿಭಾಗದ ಫೈನಲ್ನಲ್ಲಿ ಮನೀಷಾ ಕುಕ್ಕಪಳ್ಳಿ ಮತ್ತು ಋತುಪರ್ಣಾ ಪಂಡಾ ಜೋಡಿ ಶಿಖಾ ಗೌತಮ್–ಅಶ್ವಿನಿ ಭಟ್ ಎದುರು 23–21, 21–10ರಲ್ಲಿ ಗೆದ್ದರು.