ಚೆನ್ನೈ: ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಸೇರಿದಂತೆ ಭಾರತದ ಐದು ಮಂದಿ ಗ್ರ್ಯಾಂಡ್ಮಾಸ್ಟರ್ಗಳು ಕೋವಿಡ್ ಪರಿಹಾರ ನಿಧಿಗೆ ₹ 37 ಲಕ್ಷ ಸಂಗ್ರಹಿಸಿದ್ದಾರೆ. ಗುರುವಾರ ಏಕಕಾಲಕ್ಕೆ ಆನ್ಲೈನ್ನಲ್ಲಿ ನಡೆದ ಪಂದ್ಯಗಳ ಮೂಲಕ ಅವರು ಈ ಮೊತ್ತ ಸಂಗ್ರಹಿಸಿದರು.
‘ಚೆಸ್.ಕಾಮ್ ವೆಬ್ಸೈಟ್ನಲ್ಲಿ ನಡೆದ ಪಂದ್ಯಗಳ ಮೂಲಕ ಸಂಗ್ರಹಿಸಿದ ಮೊತ್ತವನ್ನು ರೆಡ್ಕ್ರಾಸ್ ಸಂಸ್ಥೆ ಹಾಗೂ ಅಖಿಲ ಭಾರತ ಚೆಸ್ ಫೆಡರೇಷನ್ನ (ಎಐಸಿಎಫ್) ‘ಚೆಕ್ಮೇಟ್ ಕೋವಿಡ್‘ ಕಾರ್ಯಕ್ರಮಕ್ಕೆ ನೀಡಲಾಗುತ್ತದೆ‘ ಎಂದು ಚೆಸ್.ಕಾಮ್ನ ಅಧಿಕಾರಿಗಳು ತಿಳಿಸಿದ್ದಾರೆ.
ಆನಂದ್ ಅವರ ಜೊತೆಗೆ ಕೊನೇರು ಹಂಪಿ, ಹರಿಕಾ ದ್ರೋಣವಳ್ಳಿ, ನಿಹಾಲ್ ಸರಿನ್ ಮತ್ತು ಆರ್.ಪ್ರಗ್ಯಾನಂದ ಅವರು ಒಟ್ಟು 105 ಪಂದ್ಯಗಳಲ್ಲಿ ಎದುರಾಳಿಗಳ ವಿರುದ್ಧ ಆಡಿದರು.
2000ಕ್ಕಿಂತ ಕಡಿಮೆ ಫಿಡೆ ರೇಟಿಂಗ್ ಹೊಂದಿರುವ ಯಾವುದೇ ಆಟಗಾರರು ಮಾಜಿ ವಿಶ್ವ ಚಾಂಪಿಯನ್ ಆನಂದ್ ಅವರ ಎದುರು ₹ 11,000 ದೇಣಿಗೆ ನೀಡುವ ಮೂಲಕ ಮತ್ತು ಇತರ ನಾಲ್ಕು ಗ್ರ್ಯಾಂಡ್ಮಾಸ್ಟರ್ಗಳೊಂದಿಗೆ ₹ 1800 ನೋಂದಣಿ ಮೊತ್ತವಾಗಿ ಪಾವತಿಸುವ ಮೂಲಕ ಆಡುವ ಅವಕಾಶ ನೀಡಲಾಗಿತ್ತು.
ಗ್ರ್ಯಾಂಡ್ಮಾಸ್ಟರ್ಗಳು ತಮ್ಮ ಪಂದ್ಯಗಳನ್ನು ಹೆಚ್ಚಿನ ಸ್ಕೋರ್ಗಳ ಅಂತರದಿಂದ ಗೆದ್ದರೆ, ಪ್ರಗ್ಯಾನಂದ ಅವರು ಎಲ್ಲ ಪಂದ್ಯಗಳನ್ನು ಜಯಿಸಲು ಯಶಸ್ವಿಯಾದರು.