ಜಕಾರ್ತ: ಥಾಮಸ್ ಕಪ್ ಟೂರ್ನಿಯಲ್ಲಿ ಭಾರತಕ್ಕೆ ಐತಿಹಾಸಿಕ ಜಯ ತಂದುಕೊಟ್ಟ ಲಕ್ಷ್ಯ ಸೇನ್ ಮತ್ತು ಎಚ್.ಎಸ್. ಪ್ರಣಯ್ ಅವರು ಇಂಡೊನೇಷ್ಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರೀಕ್ವಾರ್ಟರ್ಫೈನಲ್ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ.
ಮಂಗಳವಾರದಿಂದ ಇಲ್ಲಿ ಆರಂಭವಾಗುವ ಟೂರ್ನಿಯ ಡ್ರಾಅನ್ನು ಸೋಮವಾರ ಪ್ರಕಟಿಸಲಾಗಿದೆ. ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್ ಉತ್ತಮ ಲಯದಲ್ಲಿದ್ದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
ಜುಲೈ 28ರಿಂದ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ಗೆ ಸಜ್ಜಾಗುತ್ತಿರುವ ಭಾರತದ ಪಟುಗಳು ಇಲ್ಲಿ ಉತ್ತಮ ಸಾಮರ್ಥ್ಯಕ್ಕೆ ಮುಂದಾಗಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಲಕ್ಷ್ಯ ಸೇನ್ ಡೆನ್ಮಾರ್ಕ್ನ ಹನ್ಸ್ ಕ್ರಿಸ್ಟಿಯನ್ ಸೋಲ್ಬರ್ಗ್ ವಿಟಿಂಗಸ್ ಅವರನ್ನು ಎದುರಿಸುವರು. ಕಿದಂಬಿ ಶ್ರೀಕಾಂತ್ ಈ ಟೂರ್ನಿಯಲ್ಲಿ ಆಡುತ್ತಿಲ್ಲ.
ಪ್ರಣಯ್ ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್ನ ರಾಸ್ಮಸ್ ಗೆಮ್ಕೆ ಅವರಿಗೆ ಮುಖಾಮುಖಿಯಾಗುವರು. ಪರುಪಳ್ಳಿ ಕಶ್ಯಪ್ ಮತ್ತು ಸಮೀರ್ ವರ್ಮಾ ಕೂಡ ಕಣದಲ್ಲಿದ್ದಾರೆ.
ಮಹಿಳಾ ಸಿಂಗಲ್ಸ್ನ ಮೊದಲ ಸುತ್ತಿನಲ್ಲಿ ಸಿಂಧು, ಡೆನ್ಮಾರ್ಕ್ನ ಲಿನೆ ಕ್ರಿಸ್ಟೊಫರ್ಸನ್ ಎದುರು ಆಡಲಿದ್ದರೆ,ಸೈನಾ ನೆಹ್ವಾಲ್ ಕೂಡ ಡೆನ್ಮಾರ್ಕ್ನ ಲಿನೆ ಹೊಜಮಾರ್ಕ್ ಜಾರ್ಸ್ಫೆಲ್ಟ್ ವಿರುದ್ಧ ಸೆಣಸುವರು.
ಪುರುಷರ ಡಬಲ್ಸ್ನಲ್ಲಿ ಮನು ಅತ್ರಿ– ಬಿ.ಸುಮೀತ್ ರೆಡ್ಡಿ, ಮಹಿಳಾ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ– ಎನ್. ಸಿಕ್ಕಿ ರೆಡ್ಡಿ, ಸಿಮ್ರಾನ್ ಸಿಂಘಿ– ರಿತಿಕಾ ಥಾಕರ್ ಅದೃಷ್ಟ ಪರೀಕ್ಷಿಸಲಿದ್ದಾರೆ.