ಬ್ಯಾಂಕಾಕ್: ಭಾರತದ ಅನುಭವಿ ಆಟಗಾರ ಸೌರಭ್ ವರ್ಮಾ, ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಯ ಗಳಿಸಿದ್ದಾರೆ. ಆದರೆ ಭಾರತದ ಇನ್ನೊಬ್ಬ ಆಟಗಾರ ಅಜಯ್ ಜಯರಾಮ್ ಸೋತು ಹೊರಬಿದ್ದಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಸೌರಭ್ ಸ್ಥಳೀಯ ಆಟಗಾರ ಕಂತವಾತ್ ಲೀಲಾವೆಚಬುತ್ ಅವರನ್ನು 21–18, 21–19ರಲ್ಲಿ ಮಣಿಸಿದರು. ಜಯರಾಮ್ ಚೀನಾದ ಜೋ ಜಿ ಕ್ವಿ ಎದುರು 16–21, 13–21ರಲ್ಲಿ ಸೋತರು.
ಕಣದಿಂದ ಹಿಂದೆ ಸರಿದ ಸಿಂಧು: ಭಾರತದ ಪಿ.ವಿ.ಸಿಂಧು ಟೂರ್ನಿಯಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ. ಈ ಋತುವಿನಲ್ಲಿ ಇಲ್ಲಿಯವರೆಗೆ ಒಂದೂ ಪ್ರಶಸ್ತಿ ಗೆಲ್ಲಲಾಗದ ಅವರು ಕಳೆದ ವಾರ ನಡೆದಿದ್ದ ಇಂಡೊನೇಷ್ಯಾ ಓಪನ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದರು. ಆದರೆ ಜಪಾನ್ನ ಅಕಾನೆ ಯಮಗುಚಿ ವಿರುದ್ಧ ಸೋತು ನಿರಾಸೆಗೊಂಡಿದ್ದರು. ಥಾಯ್ಲೆಂಡ್ ಓಪನ್ನಿಂದ ದೂರ ಉಳಿಯಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಲಿಲ್ಲ.
ಅನಾರೋಗ್ಯದ ಕಾರಣ ಇಂಡೊನೇಷ್ಯಾ ಮತ್ತು ಜಪಾನ್ ಓಪನ್ ಟೂರ್ನಿಯಿಂದ ಹೊರಗೆ ಉಳಿದಿದ್ದ ಸೈನಾ ನೆಹ್ವಾಲ್ ಥಾಯ್ಲೆಂಡ್ ಓಪನ್ ಟೂರ್ನಿಯಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಬುಧವಾರ ಆರಂಭವಾಗಲಿರುವ ಮುಖ್ಯ ಸುತ್ತಿನಲ್ಲಿ ಸೈನಾ, ಅರ್ಹತಾ ಸುತ್ತು ಗೆದ್ದ ಬಂದ ಆಟಗಾರ್ತಿಯನ್ನು ಎದುರಿಸುವರು.