ನವದೆಹಲಿ: ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಅಥ್ಲೀಟ್ಗಳನ್ನು ಹುರಿದುಂಬಿಸುವ ಸಲುವಾಗಿ ಪ್ರೇರಣಾ ಗೀತೆಯನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಬುಧವಾರ ಬಿಡುಗಡೆ ಮಾಡಿದರು.
‘ಚಿಯರ್ ಫಾರ್ ಇಂಡಿಯಾ: ಹಿಂದೂಸ್ಥಾನಿ ವೇ’ ಶೀರ್ಷಿಕೆಯ ಈ ಗೀತೆಗೆ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಹಾಗೂ ಯುವ ಗಾಯಕಿ ಅನನ್ಯಾ ಬಿರ್ಲಾ ಧ್ವನಿಯಾಗಿದ್ದಾರೆ.
‘ದೇಶದ ಎಲ್ಲ ನಾಗರಿಕರು ಈ ಗೀತೆಯನ್ನು ಆಲಿಸಬೇಕು. ಟೋಕಿಯೊಗೆ ತೆರಳುತ್ತಿರುವ ಭಾರತ ತಂಡವನ್ನು ಹುರಿದುಂಬಿಸುವ ಮೂಲಕ ಅವರ ಬೆಂಬಲಕ್ಕೆ ನಿಲ್ಲಬೇಕು‘ ಎಂದು ಸಚಿವ ಅನುರಾಗ್ ಠಾಕೂರ್ ಮನವಿ ಮಾಡಿದ್ದಾರೆ.
ಕ್ರೀಡಾ ಖಾತೆ ರಾಜ್ಯ ಸಚಿವ ನಿಶಿತ್ ಪ್ರಾಮಾಣಿಕ್, ಕ್ರೀಡಾ ಕಾರ್ಯದರ್ಶಿ ರವಿ ಮಿತ್ತಲ್, ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಪ್ರಧಾನ ನಿರ್ದೇಶಕ ಸಂದೀಪ್ ಪ್ರಧಾನ್, ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಈ ಸಂದರ್ಭದಲ್ಲಿದ್ದರು.