ನವದೆಹಲಿ: ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ನಲ್ಲಿ (ಪಿಬಿಎಲ್) ಆಡದೇ ಇರಲು ಕಿದಂಬಿ ಶ್ರೀಕಾಂತ್ ನಿರ್ಧರಿಸಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಅಂತರ ರಾಷ್ಟ್ರೀಯ ಟೂರ್ನಿಗಳಿಗೆ ಹೆಚ್ಚು ಒತ್ತು ನೀಡುವುದಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಶ್ರೀಕಾಂತ್ ಕಳೆದ ಬಾರಿಯ ಟೂರ್ನಿಯಲ್ಲಿ ಬೆಂಗಳೂರು ರ್ಯಾಪ್ಟರ್ಸ್ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆದ್ದುಕೊಟ್ಟಿದ್ದರು. ಈ ಬಾರಿಯ ಟೂರ್ನಿ ಜನವರಿ 20ರಿಂದ ಫೆಬ್ರುವರಿ 9ರ ವರೆಗೆ ನಡೆಯಲಿದೆ.
‘ಮುಂದಿನ ಹಾದಿ ದುರ್ಗಮ ವಾಗಿದೆ. ನನ್ನ ಮೇಲಿನ ನಿರೀಕ್ಷೆಗಳನ್ನು ಸಾಕಾರಗೊಳಿಸಬೇಕಾದರೆ ಕಠಿಣ ಪ್ರಯತ್ನದ ಅಗತ್ಯವಿದೆ. ಆದ್ದರಿಂದ ಪಿಬಿಎಲ್ನಲ್ಲಿ ಆಡುವುದಿಲ್ಲ. ಬೆಂಗಳೂರು ರ್ಯಾಪ್ಟರ್ಸ್ ಈ ಬಾರಿಯೂ ಉತ್ತಮ ಸಾಧನೆ ಮಾಡಲಿ ಎಂದು ಆಶಿಸುತ್ತೇನೆ’ ಎಂದು ಶ್ರೀಕಾಂತ್ ಟ್ವೀಟ್ ಮಾಡಿದ್ದಾರೆ.