ಬೆಂಗಳೂರು: ಆರಂಭದಿಂದಲೂ ನಿಖರ ವೇಗ ಕಾಯ್ದುಕೊಂಡು ಓಡಿದ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಜಿ.ಕೆ.ವಿಜಯಕುಮಾರಿ, ರಾಜ್ಯ ಸೀನಿಯರ್ ಅಥ್ಲೆಟಿಕ್ ಕೂಟದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳೆಯರ 800 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ವಿಜಯಕುಮಾರಿ ಈ ಸಾಧನೆ ಮಾಡಿದರು. ಅವರು 2 ನಿಮಿಷ 11.2 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು.
ಹಾಸನದ ಸಹನಾ (2:18.2 ಸೆಕೆಂಡು) ಮತ್ತು ಯುವ ಕ್ಲಬ್ನ ರಮ್ಯಾ (2:26.5ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.
ಪುರುಷರ 800 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಫ್ಯೂಷನ್ ಕ್ಲಬ್ನ ಓಟಗಾರರು ಪಾರಮ್ಯ ಮೆರೆದರು.
ವಿಶ್ವಾಂಭರ ಕೋಳೆಕರ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ಟಿ.ಎಚ್.ದೇವಯ್ಯ ಬೆಳ್ಳಿಯ ಪದಕ ಗೆದ್ದರು. ವಿಶ್ವಾಂಭರ್ ಅವರಿಂದ 1 ನಿಮಿಷ 50.3 ಸೆಕೆಂಡು ಸಾಮರ್ಥ್ಯ ಮೂಡಿಬಂತು.
ದೇವಯ್ಯ ನಿಗದಿತ ದೂರ ಕ್ರಮಿಸಲು 1 ನಿಮಿಷ 52.3 ಸೆಕೆಂಡು ತೆಗೆದುಕೊಂಡರು.
ಪುರುಷರ 200 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಉಡುಪಿಯ ರೋಹಿತ್ ‘ಚಿನ್ನದ’ ಸಾಧನೆ ಮಾಡಿದರು. ಅವರು 21.5 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.
ಏರ್ ಫೋರ್ಸ್ನ ಸಚಿನ್ ರುಬಿ 400 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಅವರು ಅಂತಿಮ ರೇಖೆ ಮುಟ್ಟಲು 46.7 ಸೆಕೆಂಡು ಸಮಯ ತೆಗೆದುಕೊಂಡರು.
ಅಂತಿಮ ದಿನದ ಫಲಿತಾಂಶಗಳು: ಮಹಿಳೆಯರು: ಡಿಸ್ಕಸ್ ಥ್ರೋ: ಕಲಾವತಿ (ಡಿವೈಇಎಸ್; ದೂರ: 40.75 ಮೀಟರ್ಸ್)–1, ತಾನ್ಸಿಯಾ ತೆರೇಸಾ (ಕೆಜೆಸಿ; 23.05 ಮೀ.)–2, ಆರ್.ಸಾಕ್ಷಿ (ಬೆಂಗಳೂರು; 22.55 ಮೀ.)–3.
ಜಾವಲಿನ್ ಥ್ರೋ: ಕೆ.ರಶ್ಮಿ (ಆಳ್ವಾಸ್; ದೂರ: 46.37 ಮೀಟರ್ಸ್)–1, ಕರೀಷ್ಮಾ ಎಸ್.ಸನಿಲ್ (ಉಡುಪಿ; 43.63 ಮೀ.)–2, ಜ್ಯೋತಿ ರೋಕಾ (ಕೆಜೆಸಿ; 18.31ಮೀ.)–3.
20 ಕಿಲೊ ಮೀಟರ್ಸ್ ನಡಿಗೆ: ಕೆ.ಟಿ.ನೀನಾ (ರೈಲ್ವೇಸ್; ಕಾಲ: 1 ಗಂಟೆ 53ನಿಮಿಷ 5 ಸೆಕೆಂಡು)–1.
10,000 ಮೀಟರ್ಸ್ ಓಟ: ಕವಿತಾ ಯಾದವ್ (ಸಾಯ್, ಬೆಂಗಳೂರು; ಕಾಲ: 35 ನಿಮಿಷ, 31.5 ಸೆಕೆಂಡು)–1, ಚೈತ್ರ ದೇವಾಡಿಗ (ದಕ್ಷಿಣ ಕನ್ನಡ; 38:55.6ಸೆ.)–2.
ಹ್ಯಾಮರ್ ಥ್ರೋ: ಅತಿರಾ ಮುರಳೀಧರನ್ (ರೈಲ್ವೇಸ್; ದೂರ: 51.40 ಮೀಟರ್ಸ್)–1, ಅಮ್ರೀನ್ (ದಕ್ಷಿಣ ಕನ್ನಡ; 47.18 ಮೀ.)–2.
200 ಮೀಟರ್ಸ್ ಓಟ: ಎಂ.ಲಿಖಿತಾ (ಫ್ಯೂಷನ್; ಕಾಲ: 23.9ಸೆಕೆಂಡು)–1, ಇಂಚರ (ಕೆನರಾ ಬ್ಯಾಂಕ್; 24.2 ಸೆ.)–2, ಶೀತಲ್ ಕೊಲ್ಹಾಪುರೆ (ಬೆಳಗಾವಿ; 29.1 ಸೆ.)–3.
800 ಮೀಟರ್ಸ್ ಓಟ: ಜಿ.ಕೆ.ವಿಜಯ ಕುಮಾರಿ (ಸಾಯ್, ಬೆಂಗಳೂರು; ಕಾಲ: 2ನಿಮಿಷ, 11.2 ಸೆಕೆಂಡು)–1, ಸಹನಾ (ಹಾಸನ; 2:18.2ಸೆ.)–2, ರಮ್ಯಾ (ಯುವ; 2:26.5ಸೆ.)–3.
ಹೆಪ್ಟಥ್ಲಾನ್: ಎಸ್. ಮೋನಿಕಾ (ಬಿ.ಯು.ಡಿ.ಎ.ಎ; ಪಾಯಿಂಟ್ಸ್: 3,611)–1.
3,000 ಮೀಟರ್ಸ್ ಸ್ಟೀಫಲ್ಚೇಸ್: ಅನಿತಾ ಮಡಿವಾಳಪ್ಪ ಓಲೇಕರ್ (ಕಾಲ: 12 ನಿಮಿಷ, 58.4 ಸೆಕೆಂಡು)–1, ಶಾಹೀನಾ ಶಂಸುದ್ದೀನ್ (13:08.6ಸೆ.)–2, ಜ್ಯೋತಿ ಕಟ್ಟೀಮನಿ (13:27.1ಸೆ.)–3 (ಮೂವರೂ ಧಾರವಾಡ).
ಪೋಲ್ವಾಲ್ಟ್: ಮರಿಯಾ ಜೇಸನ್ (ಸಾಯ್; 3.40 ಮೀಟರ್ಸ್)–1, ಜಿ.ಸಿಂಧುಶ್ರೀ (ಸಾಯ್; 3.30 ಮೀ.)–2, ಎ.ನಿಶಾ ಬಾನು (ಐಎಎ; 3.20 ಮೀ.)–3.
ಪುರುಷರು: ಡಿಸ್ಕಸ್ ಥ್ರೋ: ಕೀರ್ತಿ ಕುಮಾರ್ (ಬೆಳಗಾವಿ; ದೂರ: 50.28 ಮೀಟರ್ಸ್)–1, ಸಂಜೀವ್ (48.18 ಮೀ.)–2, ರಜತ್ (44.13 ಮೀ.)–3 (ಇಬ್ಬರೂ ಬೆಂಗಳೂರು).
ಟ್ರಿಪಲ್ ಜಂಪ್: ಯು.ಕಾರ್ತಿಕ್ (ದೂರ; 16.44 ಮೀಟರ್ಸ್)–1, ಅಬ್ದುಲ್ಲಾ ಅಬುಬಕರ್ (16.40 ಮೀ)–2 (ಇಬ್ಬರೂ ಏರ್ಫೋರ್ಸ್), ಪಿ.ಕಪಿಲಾನಂದ (ಆಳ್ವಾಸ್; 15.69 ಮೀ.)–3.
ಜಾವಲಿನ್ ಥ್ರೋ: ಆನಂದ್ ವಿ.ಹರಿ (ಕಾರವಾರ; ದೂರ: 71.23 ಮೀಟರ್ಸ್)–1, ಮನೀಷ್ ಲಕ್ಷ್ಮಣ್ (ಉಡುಪಿ; 59.81 ಮೀ.)–2, ಚಿಕ್ಕ ತಿಮ್ಮಯ್ಯ (ತುಮಕೂರು; 51.67 ಮೀ.)–3.
20 ಕಿಲೊ ಮೀಟರ್ಸ್ ನಡಿಗೆ: ಎಲ್.ಬಿ.ಮೇಟಿ (ಕಾಲ: 1 ಗಂಟೆ, 59 ನಿಮಿಷ 4 ಸೆಕೆಂಡು)–1.
400 ಮೀಟರ್ಸ್ ಓಟ: ಸಚಿನ್ ರುಬಿ (ಏರ್ ಫೋರ್ಸ್; ಕಾಲ: 46.7 ಸೆಕೆಂಡು)–1, ರೋಹನ್ ಡಿ.ಕುಮಾರ್ (ದಕ್ಷಿಣ ಕನ್ನಡ; 47.0 ಸೆ.)–2, ನಾಗರಾಜ ಕುಡುಂಭಾವಿ (ಧಾರವಾಡ; 47.6ಸೆ.)–3.
10,000 ಮೀಟರ್ಸ್ ಓಟ: ಆರ್.ಸಂದೀಪ್ (ಮಂಡ್ಯ; ಕಾಲ: 33 ನಿಮಿಷ, 47.8 ಸೆಕೆಂಡು)–1, ಎನ್.ಡಿ.ಸುನಿಲ್ (ಧಾರವಾಡ; 34:13.9ಸೆ.)–2, ನಂಜುಂಡಪ್ಪ (ಬೆಂಗಳೂರು; 34:30.8ಸೆ.)–3.
ಹ್ಯಾಮರ್ ಥ್ರೋ: ಒ.ಪಿ.ಯಾದವ್ (ಎಎಸ್ಸಿ; ದೂರ: 47.76 ಮೀಟರ್ಸ್)–1, ಗವಿಸ್ವಾಮಿ (ಅರಣ್ಯ ಇಲಾಖೆ; 47.13ಮೀ.)–2, ಮುತ್ತಪ್ಪ (ಆಳ್ವಾಸ್; 44.78 ಮೀ.)–3.
800 ಮೀಟರ್ಸ್ ಓಟ: ವಿಶ್ವಾಂಭರ ಕೋಳೆಕರ್ (ಕಾಲ: 1 ನಿಮಿಷ, 50.3 ಸೆಕೆಂಡು)–1, ಟಿ.ಎಚ್.ದೇವಯ್ಯ (1:52.3ಸೆ.)–2 (ಇಬ್ಬರೂ ಫ್ಯೂಷನ್ ಕ್ಲಬ್), ಕುಮಾರ ಸ್ವಾಮಿ (ಕೆಎಸ್ಪಿ; 1:54.7ಸೆ.)–3.
3,000 ಮೀಟರ್ಸ್ ಸ್ಟೀಪಲ್ಚೇಸ್: ಅತುಕ್ ಪೂಣೈ (ಇಂಡಿಯನ್ ಅಥ್ಲೆಟಿಕ್ ಕ್ಲಬ್; ಕಾಲ: 9 ನಿಮಿಷ, 20.8 ಸೆಕೆಂಡು)–1, ರಾಂಪಾಲ್ (ಎಎಸ್ಸಿ; 9:32.9ಸೆ.)–2, ಕೆ.ಎನ್.ನವೀನ್ (ಕೆಎಸ್ಪಿ; 10:20.7ಸೆ.)–3.
ಡೆಕಥ್ಲಾನ್: ಜಿ.ವಿಠಲ್ (ಕೆಎಸ್ಪಿ; ಪಾಯಿಂಟ್ಸ್: 3,794)–1, ಬಿ.ಚೇತನ್ (ಕ್ರಿಸ್ತು ಜಯಂತಿ ಕಾಲೇಜು; 2,849 ಪಾ.)–2.
200 ಮೀಟರ್ಸ್ ಓಟ: ರೋಹಿತ್ (ಉಡುಪಿ; ಕಾಲ: 21.5 ಸೆಕೆಂಡು)–1, ಸುಹಾಸ್ ಎಸ್.ಗೌಡ (ಮೈಸೂರು; 21.8ಸೆ.)–2, ಎಂ.ಡಿ.ಅಮರನಾಥ್ (ಉಡುಪಿ; 22.0ಸೆ.)–3.
ಪೋಲ್ವಾಲ್ಟ್: ವಿನೀತ್ ಜೇಕಬ್ (ಐಎಎ; 4.90 ಮೀಟರ್ಸ್)–1, ಎ.ರಂಜಿತ್ (ಎನ್ಎಸ್ಎ; 4.50 ಮೀ.)–2, ಭವಿತ್ ಕುಮಾರ್ (ದಕ್ಷಿಣ ಕನ್ನಡ; 3.70 ಮೀ.)–3.
ಇದು ಚಾಂಪಿಯನ್ಷಿಪ್ ಅಲ್ಲ
ಕರ್ನಾಟಕದ ಅಥ್ಲೆಟಿಕ್ ಇತಿಹಾಸದಲ್ಲಿ ಇದೇ ಮೊದಲ ಸಲ ರಾಜ್ಯ ಸೀನಿಯರ್ ಅಥ್ಲೆಟಿಕ್ ಕೂಟ ಆಯೋಜಿಸಲಾಗಿದೆ.
ಹಿಂದೆ ವರ್ಷಕ್ಕೊಮ್ಮೆ ಅಥ್ಲೆಟಿಕ್ ಚಾಂಪಿಯನ್ಷಿಪ್ ನಡೆಸಲಾಗುತ್ತಿತ್ತು. ಅಥ್ಲೀಟ್ಗಳ ಪಾಲಿಗೆ ಇದು ತುಂಬಾ ಮಹತ್ವದ್ದೆನಿಸಿತ್ತು. ಆಗ ತಂಡ ಮತ್ತು ವೈಯಕ್ತಿಕ ಚಾಂಪಿಯನ್ಷಿಪ್ ನೀಡುವ ಪ್ರತೀತಿ ಇತ್ತು. ಇದಕ್ಕೆ ಈ ಬಾರಿ ತಿಲಾಂಜಲಿ ಇಡಲಾಗಿದೆ.
‘ಈ ಹಿಂದೆ ಆಯ್ಕೆ ಟ್ರಯಲ್ಸ್ ನಡೆಸಿ ರಾಜ್ಯ ತಂಡವನ್ನು ಆಯ್ಕೆ ಮಾಡಲಾಗುತ್ತಿತ್ತು. ಎಲ್ಲಾ ಮಕ್ಕಳಿಗೂ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಈ ಸಲ ಮುಕ್ತ ಪ್ರವೇಶ ನೀಡಿದ್ದೆವು. ಜೊತೆಗೆ ಪದಕ ಮತ್ತು ಪ್ರಮಾಣ ಪತ್ರ ನೀಡಲು ತೀರ್ಮಾನಿಸಿದ್ದೆವು’ ಎಂದು ಕರ್ನಾಟಕ ಅಥ್ಲೆಟಿಕ್ ಸಂಸ್ಥೆ (ಕೆಎಎ) ಕಾರ್ಯದರ್ಶಿ ಎ.ರಾಜವೇಲು ‘ಪ್ರಜಾವಾಣಿ’ಗೆ ತಿಳಿಸಿದರು.
ಕರ್ನಾಟಕ ಅಥ್ಲೆಟಿಕ್ ಸಂಸ್ಥೆ, ಜೂನ್ 1 ರಂದು ಪ್ರಕಟಣೆಯೊಂದನ್ನು ಹೊರಡಿಸಿತ್ತು. ಇದರಲ್ಲಿ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್ಷಿಪ್ ಮುಂದೂಡುತ್ತಿದ್ದೇವೆ ಎಂದೇ ಉಲ್ಲೇಖಿಸಲಾಗಿತ್ತು.
ಈ ಕುರಿತ ಪ್ರಶ್ನೆಗೆ ‘ಚಾಂಪಿಯನ್ಷಿಪ್ ಆಯೋಜಿಸುತ್ತಿದ್ದೇವೆ ಎಂದು ಯಾವ ಪ್ರಕಟಣೆಯನ್ನೂ ಹೊರಡಿಸಿಲ್ಲ. ಈ ಸಲ ರಿಲೇ ಸ್ಪರ್ಧೆ ನಡೆಸುತ್ತಿಲ್ಲ. ಸಮಗ್ರ ಪ್ರಶಸ್ತಿ ಕೊಡಲ್ಲ ಎಂದು ಎಲ್ಲಾ ಜಿಲ್ಲಾ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದೆವು. ತಂಡ ಚಾಂಪಿಯನ್ಷಿಪ್ ಗೆಲ್ಲುವ ಉದ್ದೇಶದಿಂದ ಹಲವರು ವಾಮ ಮಾರ್ಗ ಹಿಡಿಯುವ ಸಾಧ್ಯತೆ ಇರುತ್ತದೆ. ಕಳೆದ ಬಾರಿ ಚಾಂಪಿಯನ್ಷಿಪ್ ನಡೆದಾಗ ಕೆಲ ಸಂಸ್ಥೆಗಳು ಹೊರಗಿನವರನ್ನು ಕರೆತಂದು ಸ್ಪರ್ಧೆಗಳಲ್ಲಿ ಕಣಕ್ಕಿಳಿಸಿದ್ದು ಗಮನಕ್ಕೆ ಬಂದಿತ್ತು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಹಳೆಯ ಪದ್ಧತಿಯನ್ನು ಕೈಬಿಟ್ಟಿದ್ದೇವೆ’ ಎಂದರು.
‘ಈ ಸಲದ ಕೂಟದಲ್ಲಿ ವಿವಿಧ ಸಂಸ್ಥೆ ಮತ್ತು ಕ್ಲಬ್ಗಳ ಅಥ್ಲೀಟ್ಗಳು ಭಾಗವಹಿಸಿದ್ದರು. ಉದ್ದ ಜಿಗಿತ ಸ್ಪರ್ಧೆಯಲ್ಲಿ ಕೂಟ ದಾಖಲೆ ನಿರ್ಮಿಸಿದ್ದ ಸಂಶೀರ್, ಐಶ್ವರ್ಯ ಸೇರಿದಂತೆ ಹಲವರು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ಪ್ರತಿನಿಧಿಸಿದ್ದರು. ನಾವು ಕಳುಹಿಸಿದ್ದ ಫಲಿತಾಂಶದಲ್ಲಿ ಅವರು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ ಎಂದು ತಪ್ಪಾಗಿತ್ತು. ಇದು ಮುದ್ರಣ ದೋಷದಿಂದ ಆದ ಪ್ರಮಾದ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.