ದಾವಣಗೆರೆ: ಇದೇ 23ರಂದು ವೀರಶೈವ ಮಹಾಸಭಾದ ಸಭೆ ಇದ್ದು, ಅಂದು ಎಲ್ಲಾ ಗೊಂದಲಗಳು ಬಗೆಹರಿಯಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕೆಎಸ್ಆರ್ಟಿಸಿ ಬಸ್ ಡಿಪೊ ಹಿಂಭಾಗದಲ್ಲಿ ಬುಧವಾರ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಸರ್ಕಾರ ನ್ಯಾ.ನಾಗಮೋಹನದಾಸ್ ವರದಿ ಅನ್ವಯ ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಶಿಫಾರಸು ಮಾಡಿದೆ. ಈ ಬಗ್ಗೆ ಇನ್ನಷ್ಟು ಚರ್ಚೆ ನಡೆಯಲಿ. ವೀರಶೈವ ಮಹಾಸಭಾದ ಸಭೆಯಲ್ಲಿ ಎಲ್ಲರಿಗೂ ಸಮಾಧಾನವಾಗುವ ರೀತಿಯಲ್ಲಿ ತೀರ್ಮಾನ ಹೊರಬೀಳಬಹುದು’ ಎಂದು ಹೇಳಿದರು.
‘ಸ್ವಾಮೀಜಿಗಳ ಮಧ್ಯೆ ಘರ್ಷಣೆ ಆಗಬಾರದು. ಸಮಾಜ ಒಗ್ಗಟ್ಟಿನಿಂದ ಇರುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂಬುದೇ ನನ್ನ ಅಭಿಲಾಷೆ’ ಎಂದರು.