ನವದೆಹಲಿ: ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ್ದ ಭಾರತದ ಅನಾಸ್ ಎಡತೊಡಿಕಾ ಅವರಿಗೆ ಮತ್ತೆ ರಾಷ್ಟ್ರೀಯ ತಂಡದ ಕರೆ ಬಂದಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಇಂಟರ್ಕಾಂಟಿನೆಂಟಲ್ ಕಪ್ ಟೂರ್ನಿಗೆ ಪ್ರಕಟಿಸಲಾದ 35 ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಅವರಿಗೆ ಸ್ಥಾನ ಕಲ್ಪಿಸಲಾಗಿದೆ.
ಹೀರೊ ಕಪ್ ಅಥವಾ ಇಂಟರ್ಕಾಂಟಿನೆಲ್ ಕಪ್ ಎಂದು ಹೇಳಲಾಗುವ ಈ ಟೂರ್ನಿಯು ಜುಲೈ 7ರಿಂದ ಅಹ್ಮದಾಬಾದ್ನಲ್ಲಿ ಆರಂಭವಾಗಲಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಕಿಂಗ್ಸ್ ಕಪ್ ಟೂರ್ನಿಯ ಕ್ಯುರಸೊವ್ ವಿರುದ್ಧದ ಪಂದ್ಯದಲ್ಲಿ ತಂಡದ ಕೇಂದ್ರ ಡಿಫೆನ್ಸ್ ವಿಭಾಗ 18 ನಿಮಿಷಗಳ ಅಂತರದಲ್ಲಿ ಮೂರು ಗೋಲುಗಳನ್ನು ಬಿಟ್ಟುಕೊಟ್ಟು ನಿರಾಸೆ ಕಂಡಿತ್ತು. 1–3 ಗೋಲಗಳಿಂದ ಎದುರಾಳಿಗೆ ಭಾರತ ಮಣಿದಿತ್ತು. ರಾಹುಲ್ ಭೆಕೆ ಅವರು ಇದರಲ್ಲಿ ಪ್ರಮುಖ ದೋಷಿಯಾಗಿ ಕಂಡುಬಂದಿದ್ದರು. ತಂಡದ ಡಿಫೆನ್ಸ್ ವಿಭಾಗವನ್ನು ಬಲಪಡಿಸುವ ಉದ್ದೇಶ ಎಡತೊಡಿಕಾ ಅವರ ಸೇರ್ಪಡೆಯ ಹಿಂದಿದೆ ಎನ್ನಲಾಗಿದೆ.
ಜೂನ್ 25ರಿಂದ ಮುಂಬೈನಲ್ಲಿ ಇಂಟರ್ಕಾಂಟಿನೆಂಟಲ್ ಕಪ್ ಪೂರ್ವಸಿದ್ಧತಾ ಶಿಬಿರ ನಡೆಯಲಿದೆ. 35 ಸಂಭಾವ್ಯ ಆಟಗಾರರೂ ಇಲ್ಲಿ ಸೇರಲಿದ್ದಾರೆ.
ತಂಡಕ್ಕೆ ಆಯ್ಕೆಯಾಗಿರುವ ಕುರಿತು ಪ್ರತಿಕ್ರಿಯಿಸಿರುವ ಅನಾಸ್ ‘ಕೋಚ್ ಸ್ಟಿಮ್ಯಾಚ್ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆ ಭರವಸೆಯನ್ನು ನಾನು ಉಳಿಸಿಕೊಳ್ಳಬೇಕಿದೆ. ಮುಂಬರುವ ಶಿಬಿರಕ್ಕೆ ಸೇರಿಕೊಳ್ಳುವಂತೆ ನನಗೆ ಕೋಚ್ ಸಂದೇಶ ಕಳುಹಿಸಿದರು. ವಾಸ್ತವಾಗಿ ನಾನು ಹಿಂದೆ ಸರಿದಿದ್ದೆ. ಆ ಬಳಿಕ ಸಹಾಯಕ ಕೋಚ್ ವೆಂಕಟೇಶ್ ಷಣ್ಮುಗಂ ಎಲ್ಲ ವಿವರ ತಿಳಿಸಿದರು. ತಡಮಾಡದೆ ತಂಡದ ಶಿಬಿರ ಸೇರಿಕೊಳ್ಳುತ್ತೇನೆ’ ಎಂದು ಹೇಳಿದರು.
32 ವರ್ಷದ ಅನಾಸ್, ಜನವರಿಯಲ್ಲಿ ನಡೆದ ಎಎಫ್ಸಿ ಏಷ್ಯಾಕಪ್ ಟೂರ್ನಿಯ ನಂತರ ಅಂತರರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ್ದರು.
ಸಂಭಾವ್ಯ ಆಟಗಾರರ ತಂಡ ಇಂತಿದೆ
ಗೋಲುಕೀಪರ್ಸ್: ಗುರುಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ಕಮಲ್ಜೀತ್ ಸಿಂಗ್ ಹಾಗೂ ವಿಶಾಲ್ ಕೈಥ್
ಡಿಫೆಂಡರ್ಸ್: ಪ್ರೀತಮ್ ಕೊಟಲ್, ನಿಶು ಕುಮಾರ್, ರಾಹುಲ್ ಭೆಕೆ, ಸಲಾಮ್ ರಂಜನ್ ಸಿಂಗ್, ಸಂದೇಶ್ ಜಿಂಗಾನ್, ಆದಿಲ್ ಖಾನ್, ಅನಾಸ್ ಎಡತೊಡಿಕಾ, ಅನ್ವರ್ ಅಲಿ (ಜೂನಿಯರ್), ಸಾರ್ಥಕ್ ಗೋಲುಯಿ, ಸುಭಾಶಿಸ್ ಬೋಸ್ ಹಾಗೂ ನರೇಂದರ್ ಗೆಹ್ಲೋಟ್.
ಮಿಡ್ಫೀಲ್ಡರ್ಸ್: ಉದಾಂತ್ ಸಿಂಗ್, ಜಾಕಿಚಂದ್ ಸಿಂಗ್, ಬ್ರೆಂಡನ್ ಫೆರ್ನಾಂಡಿಸ್, ಅನಿರುದ್ಧ ಥಾಪಾ, ರೆಯನೇರ್ ಫರ್ನಾಂಡಿಸ್, ಪ್ರಣಯ್ ಹಲ್ದಾರ್, ರೌಲಿನ್ ಬೋರ್ಗೆಸ್, ವಿನೀತ್ ರೈ, ಸಹಲ್ ಅಬ್ದುಲ್, ಅಮರ್ಜೀತ್ ಸಿಂಗ್, ಲಾಲ್ಲಿಯಾಂಜುವಾಲಾ ಚಾಂಗ್ಟೆ, ಮಂದರ್ ರಾವ್ ದೇಸಾಯಿ, ಆಶಿಕ್ ಕುರುನಿಯನ್, ನಿಖಿಲ್ ಪೂಜಾರಿ ಹಾಗೂ ಮೈಕೆಲ್ ಸೂಸೈರಾಜ್.
ಫಾವರ್ಡ್ಸ್: ಬಲವಂತ್ ಸಿಂಗ್, ಸುನಿಲ್ ಚೆಟ್ರಿ, ಜಾಬಿ ಜಸ್ಟಿನ್, ಫಾರೂಕ್ ಚೌಧರಿ ಹಾಗೂ ಮನ್ವೀರ್ ಸಿಂಗ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.