ಬೆಂಗಳೂರು: ಅಖಿಲ್ ಬಿ.ಎನ್. ಹ್ಯಾಟ್ರಿಕ್ ಸಾಧಿಸಿದರು. ಅವರ ಆಟದ ಬಲದಿಂದ ಹಾಕಿ ಕೂರ್ಗ್ ತಂಡವು ಡಿವೈಇಎಸ್ ಶಿವಮೊಗ್ಗ ಎದುರು 4–1ರಿಂದ ಜಯ ಸಾಧಿಸಿತು. ಇಲ್ಲಿನ ಶಾಂತಿನಗರದಲ್ಲಿರುವ ಕೆ.ಎಂ.ಕಾರ್ಯಪ್ಪ ಹಾಕಿ ಅರೆನಾದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪುರುಷರ ಸಬ್ಜೂನಿಯರ್ ಹಾಕಿ ಟೂರ್ನಿಯಲ್ಲಿ ‘ಎ’ ಗುಂಪಿನ ಪಂದ್ಯದಲ್ಲಿ ಬುಧವಾರ ಅಖಿಲ್ ಮಿಂಚಿದರು.
ಅಖಿಲ್ ಅವರು 18, 24 ಹಾಗೂ 25ನೇ ನಿಮಿಷ ಗೋಲು ಗಳಿಸಿದರು. ಇನ್ನೊಂದು ಗೋಲು ಧ್ರುವ ಬಿ.ಎಸ್ (15ನೇ ನಿಮಿಷ) ಅವರ ಮೂಲಕ ಬಂದಿತು. ಶಿವಮೊಗ್ಗ ತಂಡದ ಸುನೀಲ್ (29ನೇ ನಿಮಿಷ) ಒಂದು ಗೋಲು ದಾಖಲಿಸಿ ತಮ್ಮ ತಂಡದ ಸೋಲಿನ ಅಂತರ ತಗ್ಗಿಸಿದರು.
‘ಎ’ ಗುಂಪಿನ ಮತ್ತೊಂದು ಹಣಾಹಣಿಯಲ್ಲಿ ಡಿವೈಇಎಸ್ ಕೂಡಿಗೆ ‘ಎ’ ತಂಡವು ಡಿವೈಇಎಸ್ ಕಲಬುರಗಿ ಎದುರು 4–0 ಗೋಲುಗಳಿಂದ ಗೆದ್ದಿತು. ಕೂಡಿಗೆ ‘ಎ’ ತಂಡದ ಪವನ್ ಕೆ.ಜೆ (4, 16ನೇ ನಿಮಿಷ) ಹಾಗೂ ನಕುಲ್ (13, 14ನೇ ನಿಮಿಷ) ತಲಾ ಎರಡು ಗೋಲು ಹೊಡೆದರು.
‘ಬಿ’ ಗುಂಪಿನ ಪಂದ್ಯದಲ್ಲಿ ಹಾಕಿ ಧಾರವಾಡ ತಂಡವು ಡಿವೈಇಎಸ್ ಕೂಡಿಗೆ ‘ಬಿ’ ತಂಡವನ್ನು 2–1ರಿಂದ ಮಣಿಸಿತು. ಧಾರವಾಡ ತಂಡದ ಸಿದ್ಧಾರ್ಥ್ (7ನೇ ನಿಮಿಷ) ಹಾಗೂ ವಿವೇಕ್ ಬಾಗ್ದೆ (17ನೇ ನಿಮಿಷ) ಯಶಸ್ಸು ಕಂಡರು. ಕೂಡಿಗೆ ‘ಬಿ’ ಪರ ಸುಪ್ರೀತ್ ಎಸ್. 26ನೇನಿಮಿಷ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.