ಹಾಸನ: ಜಿಲ್ಲೆಯಲ್ಲಿ ಸ್ವೀಕೃತಿಯಾಗಿರುವ ಮತದಾರರ ನೋಂದಣಿ, ತಿದ್ದುಪಡಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಎಲ್ಲ ಕ್ಷೇತ್ರಗಳ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿ ಗಳ ಸಭೆಯಲ್ಲಿ ಮಾತನಾಡಿದರು.
ಮಾದರಿ ಮತಗಟ್ಟೆಗಳ ವಿವರಗಳನ್ನು ತಕ್ಷಣ ಒದಗಿಸಿ, ಅಲ್ಲಿ ನೀಡಲಿರುವ ವಿಶೇಷ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು. ಚೆಕ್ ಪೋಸ್ಟ್ಗಳಲ್ಲಿ ಕೆಲಸ ಮಾಡುವವರ ಸುರಕ್ಷತೆಗಳ ಬಗ್ಗೆ ಹೆಚ್ಚಿನ ನಿಗಾವಹಿಸಿಬೇಕು. ಅಗತ್ಯಕ್ಕೆ ಅನುಗುಣವಾಗಿ ಬ್ಯಾರಿಕೇಡ್ಗಳನ್ನು ಒದಗಿಸಿ ಎಂದು ಸೂಚಿಸಿದರು.
ಸುವಿಧಾ, ಸಮಾಧಾನ್ ಅಪ್ಲಿಕೇಷನ್ಗಳಲ್ಲಿ ಬರುವ ಮನವಿ ಅರ್ಜಿಗಳನ್ನು ಕಾಲಮಿತಿ ಒಳಗೆ ಪೂರ್ಣಗೊಳಿಸಬೇಕು. ಯಾವುದೇ ವಿಳಂಬಕ್ಕೆ ಅವಕಾಶ ಇರದು. ನೇರವಾಗಿ ಬರುವ ಅರ್ಜಿಗಳನ್ನು ಸಹ ವಿಲೇವಾರಿ ಮಾಡಿ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಮಸ್ಟರಿಂಗ್ , ಡಿ.ಮಸ್ಟರಿಂಗ್ ಗಳಿಗೆ ಜಾಗ ಗುರುತಿಸಿ ಮಾರ್ಕಿಂಗ್ ಮಾಡಿಕೊಳ್ಳಿ ಎಂದ ಅವರು, ಏ. 17ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಪ್ರಾರಂಭವಾಗಲಿದ್ದು, ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಗೊಂದಲಗಳು ಇಲ್ಲದಂತೆ ಚುನಾವಣೆ ನಿರ್ವಹಣೆ ಮಾಡುವಂತೆ ನಿರ್ದೇಶನ ನೀಡಿದರು.
ಚುನಾವಣೆ ದಿನ 334 ಬಸ್ಗಳ ಅಗತ್ಯ ಇದೆ. ಈಗಲೇ ಸರಿಯಾದ ಯೋಜನೆ ರೂಪಿಸಿ ಕ್ಷೇತ್ರವಾರು ಪೂರೈಕೆ ಮಾಡಿ ಎಂದು ಕೆ.ಎಸ್ ಆರ್.ಟಿ.ಸಿ ಬಿಭಾಗ ನಿಯಂತ್ರಣಾಧಿಕಾರಿಗೆ ಸೂಚಿಸಿದರು.
ಜಿಲ್ಲೆಗೆ ಹೆಚ್ಚುವರಿ ಸಿ.ಆರ್.ಪಿ.ಎಫ್ ತಂಡ ಆಗಮಿಸುತ್ತಿದೆ. ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ ಸೇರಿದಂತೆ ಚುನಾವಣಾ ಸೂಕ್ಷ್ಮ ಕ್ಷೇತ್ರಗಳಿಗೆ ಅವರನ್ನು ನಿಯೋಜಿಸಲಾಗುವುದು. ಎಲ್ಲ ಚುನಾವಣಾಧಿಕಾರಿಗಳು ಪ್ರತಿದಿನ ಬ್ಯಾಂಕ್ ವಹಿವಾಟು, ಎಟಿಎಂ ಅಂಕಿ ಅಂಶಗಳ ಮೇಲೆ ಗಮನಹರಿಸಿ ಎಂದು ಸಲಹೆ ನೀಡಿದರು.
ಪ್ರತಿದಿನ ಪೊಲೀಸ್, ಅಬಕಾರಿ ಸಾರಿಗೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯಿರಿ ಎಂದ ಅವರು, ಎಲ್ಲೆಲ್ಲಿ ವೆಬ್ ಕಾಸ್ಟಿಂಗ್ ಅಗತ್ಯ ಇದೆ. ಅದರ ಬಗ್ಗೆ ಆದಷ್ಟು ಬೇಗ ಮಾಹಿತಿ ನೀಡುವಂತೆ ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ, ಸಕಲೇಶಪುರ ಉಪ ವಿಭಾಗಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ , ವಿವಿಧ ಕ್ಷೇತ್ರಗಳ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ತಪಾಸಣೆ ಚುರುಕುಗೊಳಿಸಲು ಸೂಚನೆ
ಚೆಕ್ ಪೋಸ್ಟ್ ಗಳು ಹಾಗೂ ಫ್ಲೈಯಿಂಗ್ ಸ್ಕ್ವಾಡ್ ಗಳಲ್ಲಿ ಕರ್ತವ್ಯ ರ್ನಿಹಿಸುವವರ ಆರೋಗ್ಯದ ಬಗ್ಗೆ ಗಮನ ಹರಿಸಿ. ಎಲ್ಲರಿಗೂ ಸೂಕ್ತ ತರಬೇತಿ ನೀಡಿ ತಪಾಸಣೆ ಇನ್ನಷ್ಟು ತೀವ್ರಗೊಳಿಸುವ ಮೂಲಕ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಡಿಯೊ ಸಂವಾದದಲ್ಲಿ ಚುನಾವಣಾ ಸಿಬ್ಬಂದಿ ನಿಯೋಜನೆ ಹಾಗೂ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ, ಫ್ಲೈಯಿಂಗ್ ಸ್ಕ್ವಾಡ್ಗಳ ಕಾರ್ಯಾಚರಣೆ ಕುರಿತು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗೆ ಹಲವು ಸಲಹೆ, ಸೂಚನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.