ಮಂಗಳೂರು: ‘ಈ ಬಾರಿಯ ವಿಧಾನ ಸಭಾ ಚುನಾವಣೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಡುವಿನ ಕದನವಲ್ಲ. ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಡುವಿನ ಕದನ’ ಎಂದು ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಹೇಳಿದರು.
ಪಕ್ಷದ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರಿಗೆ ಈ ಚುನಾವಣೆಯಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಎದುರಾಳಿಗಳೇ ಅಲ್ಲ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಎದುರಾಳಿಗಳು. ಈಗಿನ ರಾಜಕೀಯ ಚಿತ್ರಣವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ’ ಎಂದರು.
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಅವಧಿಯಲ್ಲಿ ದೇಶದ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ಗಳು ನಷ್ಟದ ಹಾದಿಯಲ್ಲಿವೆ. ಬ್ಯಾಂಕಿಂಗ್ ವ್ಯವಸ್ಥೆಯನ್ನು ಸರಿದಾರಿಯಲ್ಲಿ ಕೊಂಡೊ ಯ್ಯಲು ಕೇಂದ್ರ ಸರ್ಕಾರ ವಿಫಲವಾಗಿದೆ. ಅದರ ಲಾಭ ಪಡೆದ ನೀರವ್
ಮೋದಿ ₹ 12,636 ಕೋಟಿ ವಂಚಿಸಿ ಪರಾರಿಯಾದ. ರೋಟೊಮ್ಯಾಕ್ ಪೆನ್ ತಯಾ ರಿಕಾ ಕಂಪೆನಿ ₹ 3,695 ಕೋಟಿ ವಂಚಿಸಿದೆ. ಕನಿಷ್ಕಾ ಗೋಲ್ಡ್ ಕಂಪೆನಿ ₹ 824 ಕೋಟಿ ವಂಚಿಸಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರವು 2016–17ರಲ್ಲಿ ₹ 57,000 ಕೋಟಿ ವಸೂಲಾಗದ ಸಾಲವನ್ನು ಮನ್ನಾ ಮಾಡಿತ್ತು. 2017–18ರಲ್ಲಿ ₹ 87,683 ಕೋಟಿ ಮನ್ನಾ ಮಾಡಲಾಗಿದೆ. 2016–17ರಲ್ಲಿ ಬ್ಯಾಂಕ್ಗಳು ₹ 5,000 ಕೋಟಿ ವಸೂಲಿ ಮಾಡಿದ್ದವು. 2017–18ರಲ್ಲಿ ₹ 8,680 ಕೋಟಿ ವಸೂಲಿಯಾಗಿದೆ ಎಂದರು.
ಸಮಿತಿಗಳ ರಚನೆ: ವಿಧಾನಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಮಟ್ಟದ ಚುನಾವಣಾ ಪ್ರಚಾರ ಸಮಿತಿಯ ಮಾದರಿಯಲ್ಲೇ ವಿಧಾನಸಭಾ ಕ್ಷೇತ್ರ ಮತ್ತು ಬ್ಲಾಕ್ ಹಂತದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲಾ ಮಟ್ಟದ ಸಮಿತಿಗೆ ಇಬ್ಬರು ಸಂಚಾಲಕರು, 20 ಉಪಾಧ್ಯಕ್ಷರು ಮತ್ತು 11 ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.