ಲಖನೌ: ಉತ್ತರ ಪ್ರದೇಶದಲ್ಲಿ ಶುಕ್ರವಾರ ಬೀಸಿದ ದೂಳು ಬಿರುಗಾಳಿಗೆ ಸಿಲುಕಿ 15 ಮಂದಿ ಬಲಿಯಾಗಿದ್ದು, ಒಂಬತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಬಿರುಗಾಳಿಯಿಂದಾಗಿ ಉರುಳಿ ಬಿದ್ದ ಮರಗಳು ಹಾಗೂ ಮನೆಗಳ ಗೋಡೆ ಕುಸಿತದ ಪರಿಣಾಮ ಸಾವಿನ ಸಂಖ್ಯೆ ಏರಿಕೆಯಾಗಿರುವುದಾಗಿ ಉತ್ತರ ಪ್ರದೇಶ ಸರ್ಕಾರದ ವಕ್ತಾರ ಶನಿವಾರ ತಿಳಿಸಿದ್ದಾರೆ.
ಮುರಾದಾಬಾದ್ನಲ್ಲಿ ಬಿರುಗಾಳಿಯೊಂದಿಗೆ ಆರ್ಭಟಿಸಿದ ಸಿಡಿಲಿಗೆ 7 ಮಂದಿ ಬಲಿಯಾಗಿದ್ದಾರೆ. ಸಂಭಲ್ನಲ್ಲಿ ಮೂರು ಮಂದಿ, ಮುಜಾಫರ್ನಗರ್ ಮತ್ತು ಮೀರತ್ನಲ್ಲಿ ತಲಾ ಇಬ್ಬರು ಹಾಗೂ ಅಮರೋಹಾದಲ್ಲಿ ಒಬ್ಬ ವ್ಯಕ್ತಿ ಸಾವೀಗೀಡಾಗಿರುವುದಾಗಿ ತಿಳಿಸಿದ್ದಾರೆ.
ಹಾನಿಗೊಳಗಾದ ಜಿಲ್ಲೆಗಳಲ್ಲಿ 24 ಗಂಟೆಯೊಳಗೆ ಪರಿಹಾರ ವಿತರಣೆಯಾಗುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಕಳೆದ ತಿಂಗಳು ಮೂರು ಬಾರಿ ಬೀಸಿದ ದೂಳು ಬಿರುಗಾಳಿ ಪರಿಣಾಮ ಒಟ್ಟು 130 ಜನ ಬಲಿಯಾಗಿದರು.