ನವದೆಹಲಿ: ಅಜ್ಲಾನ್ ಷಾ ಕಪ್ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಹಾಕಿ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದ ಅಂಪೈರ್ ಸುರೇಶ್ ಕುಮಾರ್ ಠಾಕೂರ್ (51) ಮೊಹಾಲಿಯಲ್ಲಿ ಶುಕ್ರವಾರ ನಿಧನರಾದರು. ಅವರು ಕೋವಿಡ್ ಸೋಂಕಿಗೆ ಒಳಗಾಗಿದ್ದರು ಎಂದು ಹಾಕಿ ಇಂಡಿಯಾ ತಿಳಿಸಿದೆ.
ಜರ್ಮನಿಯ ಹ್ಯಾಂಬರ್ಗ್ನಲ್ಲಿ ನಡೆದ ನಾಲ್ಕು ರಾಷ್ಟ್ರಗಳ ಟೂರ್ನಿ, ಮಲೇಷ್ಯಾದ ಕ್ವಾಲಾಲಂಪುರದಲ್ಲಿ ನಡೆದ ಅಜ್ಲಾನ್ ಷಾ ಟೂರ್ನಿ, 2013 ಮತ್ತು 2014ರಲ್ಲಿ ನಡೆದ ಹಾಕಿ ಇಂಡಿಯಾ ಲೀಗ್ ಮುಂತಾದವು ಅವರು ಪಾಲ್ಗೊಂಡ ಪ್ರಮುಖ ಟೂರ್ನಿಗಳು.
‘ಸುರೇಶ್ ಕುಮಾರ್ ಠಾಕೂರ್ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಂಡ ಭಾರತದ ಪ್ರಮುಖ ಅಂಪೈರ್. ದೇಶದ ಹಾಕಿ ಕ್ರೀಡಾಂಗಣ ಈಗ ಅವರನ್ನು ಕಳೆದುಕೊಂಡಿರುವುದು ಬೇಸರದ ವಿಷಯ’ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ಗ್ಯಾನೇಂದ್ರೊ ನಿಂಗೊಂಬಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.