ಲಖನೌ: ಭಾರತೀಯ ಕುಸ್ತಿಗೆ ದೊಡ್ಡಮಟ್ಟದ ಉತ್ತೇಜನ ದೊರಕಿದೆ. 2032ರ ಒಲಿಂಪಿಕ್ಸ್ ವರೆಗೆ ಈ ಕ್ರೀಡೆಯನ್ನು ಸಮಗ್ರವಾಗಿ ಪ್ರೋತ್ಸಾಹಿಸುವ ಹೊಣೆಯನ್ನು ಉತ್ತರ ಪ್ರದೇಶ ಸರ್ಕಾರ ವಹಿಸಿಕೊಳ್ಳಲಿದೆ.
ಕುಸ್ತಿಪಟುಗಳಿಗೆ ಬೆಂಬಲ ಮತ್ತು ಮೂಲಸೌಕರ್ಯ ಒದಗಿಸಲು ₹170 ಕೋಟಿ ರೂಪಾಯಿಗಳ ಹೂಡಿಕೆಯನ್ನು ನಿರೀಕ್ಷಿಸಲಾಗಿದೆ ಎಂದು ಭಾರತದ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಪಿಟಿಐಗೆ ತಿಳಿಸಿದ್ದಾರೆ.
ಹಾಕಿಗೆ ಒಡಿಶಾ ಸರ್ಕಾರ ನೀಡಿದ ಪ್ರೋತ್ಸಾಹದಿಂದ ಉತ್ತೇಜನಗೊಂಡಿರುವ ಉತ್ತರ ಪ್ರದೇಶವು ಕುಸ್ತಿಯನ್ನು ಪ್ರೋತ್ಸಾಹಿಸಲು ಮುಂದೆ ಬಂದಿದೆ ಎಂದು ಡಬ್ಲ್ಯುಎಫ್ಐನ ಮುಖ್ಯಸ್ಥರೂ ಆದ ಸಿಂಗ್ ಹೇಳಿದ್ದಾರೆ.
‘ಒಡಿಶಾ ಒಂದು ಸಣ್ಣ ರಾಜ್ಯ. ಆದರೂ ಹಾಕಿಯನ್ನು ಅತ್ಯುತ್ತಮವಾಗಿ ಪ್ರೋತ್ಸಾಹಿಸಿದ್ದಾರೆ. ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶವೇಕೆ ಕುಸ್ತಿಯನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ ಎಂದು ನಾವು ಯೋಚಿಸಿದೆವು. ಸಿಎಂ ಯೋಗಿ ಆದಿತ್ಯನಾಥ್ ಅದನ್ನು ಒಪ್ಪಿಕೊಂಡಿದ್ದಾರೆ’ ಎಂದು ಸಿಂಗ್ ತಿಳಿಸಿದರು.