ಬೆಂಗಳೂರು: ಸೌಮ್ಯಾ ಮತ್ತು ಯಮುನ ಅವರ ಕೈಚಳಕದಲ್ಲಿ ಅರಳಿದ ಹ್ಯಾಟ್ರಿಕ್ ಗೋಲುಗಳ ಬಲದಿಂದ ಹಾಸನ ತಂಡ ಹಾಕಿ ಕರ್ನಾಟಕ ಆಶ್ರಯದ ರಾಜ್ಯಮಟ್ಟದ ಸಬ್ ಜೂನಿಯರ್ ಮಹಿಳಾ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.
ಇಲ್ಲಿನ ಶಾಂತಿನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅರೇನಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಹಾಸನ 8–1 ಗೋಲುಗಳಿಂದ ಶಿವಮೊಗ್ಗ ತಂಡವನ್ನು ಮಣಿಸಿತು.
ಸೌಮ್ಯಾ 7, 8 ಮತ್ತು 21ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಯಮುನ 10, 20 ಮತ್ತು 26ನೇ ನಿಮಿಷಗಳಲ್ಲಿ ಗೋಲು ಹೊಡೆದರು. ಟಿ.ಎಲ್.ನಿಶು ಮತ್ತು ಸಿ.ಎಂ.ಸಹನಾ ಅವರು ಕ್ರಮವಾಗಿ 13 ಮತ್ತು 28ನೇ ನಿಮಿಷಗಳಲ್ಲಿ ಕೈಚಳಕ ತೋರಿದರು.
ಶಿವಮೊಗ್ಗ ಪರ ಇಂಪನಾ 38ನೇ ನಿಮಿಷದಲ್ಲಿ ಗೋಲು ಬಾರಿಸಿ ಅಂತರ ತಗ್ಗಿಸಲಷ್ಟೇ ಶಕ್ತರಾದರು.
ದಿನದ ಇನ್ನೊಂದು ಪಂದ್ಯದಲ್ಲಿ ಕೊಡಗು 5–0 ಗೋಲುಗಳಿಂದ ಧಾರವಾಡ ತಂಡವನ್ನು ಪರಾಭವಗೊಳಿಸಿತು.
ವಿಜಯಿ ತಂಡದ ದೇಚಮ್ಮಾ (3 ಮತ್ತು 10), ಜೀವಿತಾ (14 ಮತ್ತು 20) ತಲಾ ಎರಡು ಗೋಲು ಗಳಿಸಿದರು. ದ್ವಿತೀಯಾರ್ಧದಲ್ಲೂ ಈ ತಂಡ ಆಕ್ರಮಣಕಾರಿಯಾಗಿ ಆಡಿತು. ಸುಫಾನಾ 37ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿದರು.