ಕೋಲ್ಕತ್ತ: ಬಣ ಜಗಳದಲ್ಲಿ ತೊಡಗಿದ್ದ ರಾಷ್ಟ್ರೀಯ ಆರ್ಚರಿ ಫೆಡರೇಷನ್ (ಎಎಐ)ನ ಚುನಾವಣೆ ನಡೆದು ವಾರ ಕಳೆಯುವುದರೊಳಗೆ, ವಿಶ್ವ ಆರ್ಚರಿ ಸಂಸ್ಥೆಯು, ಭಾರತದ ಮೇಲೆ ಹೇರಿದ್ದ ನಿಷೇಧವನ್ನು ಷರತ್ತಿಗೊಳಪಟ್ಟು ಗುರುವಾರ ವಾಪಸು ಪಡೆಯಿತು.
ಉತ್ತಮ ಆಡಳಿತ ನೀಡುವುದರ ಜೊತೆಗೆ ವಿಶ್ವ ಆರ್ಚರಿ ಸಂಸ್ಥೆಯ ನಿಯಮಾವಳಿಗಳನ್ನು ಪಾಲಿಸಬೇಕು. ಮೂರು ತಿಂಗಳಿಗೊಮ್ಮೆ ವರದಿ ಮಾಡಿಕೊಳ್ಳಬೇಕು ಎಂದು ಸಂಸ್ಥೆಯ ಹೇಳಿಕೆಯಲ್ಲಿ ಸೂಚಿಸಲಾಗಿದೆ.
ಎಎಐ ಮೇಲಿನ ನಿಷೇಧದಿಂದ ಈ ಹಿಂದೆ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಭಾರತದ ಬಿಲ್ಗಾರರು ‘ತಟಸ್ಥ ಅಥ್ಲೀಟ್ಸ್’ ತಂಡದ ಹೆಸರಿನಲ್ಲಿ ಭಾಗವಹಿಸಿದ್ದರು. ಇನ್ನು ಮುಂದೆ ದೇಶವನ್ನು ಪ್ರತಿನಿಧಿಸಲು ಅವಕಾಶ ಒದಗಿದೆ.
ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರು ಕಳೆದ ಶನಿವಾರ ನಡೆದ ಚುನಾವಣೆಯಲ್ಲಿ ಎಎಐ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ವಿಶ್ವ ಆರ್ಚರಿ ಸಂಸ್ಥೆಯ ಪ್ರತಿನಿಧಿ ಸೇರಿದಂತೆ ಮೂವರು ವೀಕ್ಷಕರ ಸಮ್ಮುಖದಲ್ಲಿ ಈ ಚುನಾವಣೆ ನಡೆದಿತ್ತು. ಚುನಾವಣೆ 2–3 ಬಾರಿ ಮುಂದಕ್ಕೆ ಹೋಗಿತ್ತು.
ಎಎಐ ಮಾಜಿ ಅಧ್ಯಕ್ಷ ವಿಜಯಕುಮಾರ್ ಮಲ್ಹೋತ್ರಾ ಅವರ ಬೆಂಬಲ ಪಡೆದಿದ್ದ ಮುಂಡಾ, ವಿರೋಧಿ ಬಣದ ಬಿ.ವಿ.ಪಿ ರಾವ್ ಅವರನ್ನು 34–18 ಮತಗಳಿಂದ ಸೋಲಿಸಿದ್ದರು.