ಬೆಂಗಳೂರು: ಏಷ್ಯಾ ಕಪ್ ಹಾಕಿ ಟೂರ್ನಿಗೆ ಸಜ್ಜಾಗುತ್ತಿರುವ ಭಾರತ ತಂಡ ಶುಕ್ರವಾರ ಆಘಾತಕ್ಕೆ ಒಳಗಾಗಿದೆ. ತಂಡದ ನಾಯಕ ರೂಪಿಂದರ್ ಪಾಲ್ ಸಿಂಗ್ ಗಾಯಗೊಂಡಿರುವುದರಿಂದ ಟೂರ್ನಿಗೆ ಲಭ್ಯ ಇರುವುದಿಲ್ಲ.
ಭಾರತ ಕ್ರೀಡಾ ಪ್ರಾಧಿಕಾರದ ಬೆಂಗಳೂರು ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ತಂಡದ ಅಭ್ಯಾಸದ ವೇಳೆ ಡ್ರ್ಯಾಗ್ ಫ್ಲಿಕ್ಕರ್ ರೂಪಿಂದರ್ ಅವರ ಮಣಿಗಂಟಿಗೆ ಗಾಯವಾಗಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ.
ಬೀರೇಂದ್ರ ಲಾಕ್ರಾ 20 ಮಂದಿಯ ತಂಡವನ್ನು ಮುನ್ನಡೆಸಲಿದ್ದು ಸ್ಟ್ರೈಕರ್, ಕನ್ನಡಿಗ ಎಸ್.ವಿ.ಸುನಿಲ್ ಉಪನಾಯಕನಾಗಿರುವರು. ರೂಪಿಂದರ್ ಬದಲಿಗೆ ನೀಲಂ ಸಂಜೀವ್ ಸೆಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಜಕಾರ್ತದಲ್ಲಿ ಮೇ 23ರಂದು ಏಷ್ಯಾ ಕಪ್ ಟೂರ್ನಿ ಆರಂಭವಾಗಲಿದ್ದು ಹಾಲಿ ಚಾಂಪಿಯನ್ ಭಾರತ ಮತ್ತೊಮ್ಮೆ ಮಿಂಚುವ ಭರವಸೆಯಲ್ಲಿದೆ.
‘ರೂಪಿಂದರ್ ಅವರು ಗಾಯಗೊಂಡಿರುವುದು ಮತ್ತು ಏಷ್ಯಾಕಪ್ಗೆ ಲಭ್ಯ ಇಲ್ಲದಿರುವುದು ಬೇಸರದ ವಿಷಯ. ಬೀರೇಂದ್ರ ಲಾಕ್ರಾ ಮತ್ತು ಎಸ್.ವಿ.ಸುನಿಲ್ ಅವರು ಅನುಭವಿ ಆಟಗಾರರಾಗಿದ್ದು ಅವರ ಮೇಲೆ ಭರವಸೆ ಇದೆ’ ಎಂದು ಕೋಚ್ ಬಿ.ಜೆ.ಕಾರ್ಯಪ್ಪ ಅಭಿಪ್ರಾಯಪಟ್ಟಿದ್ದಾರೆ.