ನವದೆಹಲಿ: ಬಡ್ತಿಯಲ್ಲಿ ಮೀಸಲಾತಿ ನೀಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕೇಂದ್ರ ಮಾತ್ರವಲ್ಲದೆ ರಾಜ್ಯ ಸರ್ಕಾರಿ ನೌಕರರಿಗೂ ಅನ್ವಯವಾಗುತ್ತದೆ ಎಂದು ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಬುಧವಾರ ಇಲ್ಲಿ ತಿಳಿಸಿದರು.
ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಚಿವರ ತಂಡದ ಸಭೆಯ ಬಳಿಕ ಈ ಮಾಹಿತಿ ನೀಡಲಾಯಿತು.
ಸುಪ್ರೀಂ ಕೋರ್ಟ್ ಆದೇಶ ಅನುಷ್ಠಾನಗೊಳಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ನಿರ್ದೇಶಿಸಲಾಗಿದೆ ಎಂದು ಪಾಸ್ವಾನ್ ತಿಳಿಸಿದರು.
ಇದೇ 5ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ಕೆಲವು ಗೊಂದಲಗಳಾಗಿದ್ದವು. ಈ ತೀರ್ಪು ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ
ಅನ್ವಯಿಸುತ್ತದೆ ಎಂದೇ ರಾಜ್ಯ ಸರ್ಕಾರಗಳು ಭಾವಿಸಿದ್ದವು ಎಂದು ಹೇಳಿದರು.
ಎಸ್ಸಿ/ಎಸ್ಟಿ ಸಮಸ್ಯೆ ಪರಿಹಾರಕ್ಕೆ ತಂಡ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ, ಪರಿಹಾರ ಸೂಚಿಸಲು ಸರ್ಕಾರ ಸಚಿವರ ತಂಡ (ಗ್ರೂಪ್ ಆಫ್ ಮಿನಿಸ್ಟರ್ಸ್) ರಚಿಸಿದೆ. ಈ ತಂಡಕ್ಕೆ ಗೃಹ ಸಚಿವರು ಅಧ್ಯಕ್ಷರಾಗಿದ್ದಾರೆ.
ಕಾನೂನು ಸಚಿವ ರವಿಶಂಕರ ಪ್ರಸಾದ್, ಸಾಮಾಜಿಕ ನ್ಯಾಯ ಸಚಿವ ಥಾವರ್ ಚಂದ್ ಗೆಹ್ಲೋಟ್, ಹಣಕಾಸು ಸಚಿವ ಪೀಯೂಷ್ ಗೋಯಲ್, ಪ್ರಧಾನಿ ಕಚೇರಿಯಲ್ಲಿನ ರಾಜ್ಯಸಚಿವ ಜಿತೇಂದ್ರ ಸಿಂಗ್ ಹಾಗೂ ಪಾಸ್ವಾನ್ ತಂಡದಲ್ಲಿದ್ದಾರೆ.