ಮೈಸೂರು: ಆತಿಥೇಯ ಮೈಸೂರು, ಹಾಸನ ಮತ್ತು ಶಿವಮೊಗ್ಗ ತಂಡಗಳು ‘ಹಾಕಿ ಮೈಸೂರು’ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಆಹ್ವಾನಿತ ಹಾಕಿ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದವು.
ಮೈಸೂರು ವಿ.ವಿ. ಹಾಕಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಮೈಸೂರು ತಂಡ 6–1 ಗೋಲುಗಳಿಂದ ತುಮಕೂರು ತಂಡವನ್ನು ಮಣಿಸಿತು. ತಲಾ ಎರಡು ಗೋಲುಗಳನ್ನು ಗಳಿಸಿದ ಕೆ.ಡಿ.ಬಿದ್ದಪ್ಪ ಮತ್ತು ಚೇತನ್ ಸೋಮಣ್ಣ ಅವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
‘ಸಿ’ ಗುಂಪಿನ ಪಂದ್ಯದಲ್ಲಿ ಹಾಸನ ತಂಡ ಧಾರವಾಡ ಮತ್ತು ಗದಗ ತಂಡಗಳ ವಿರುದ್ಧ 2–1 ಅಂತರದ ಗೆಲುವು ಸಾಧಿಸಿತು. ಧಾರವಾಡ ತಂಡದ ವಿರುದ್ಧ ತಾರಾನಾಥ (22ನೇ ನಿ.), ಕುಶ ಗೌಡ (48ನೇ ನಿ.) ಹಾಗೂ ಗದಗ ತಂಡದ ವಿರುದ್ಧ ರಮೇಶ್ (14ನೇ ನಿ.), ಪವನ್ ಕುಮಾರ್ (34ನೇ ನಿ.) ಗೋಲು ಗಳಿಸಿದರು.
ದಿನದ ಇತರ ಪಂದ್ಯಗಳಲ್ಲಿ ಕಲಬುರ್ಗಿ 1–0 ರಲ್ಲಿ ಮಂಗಳೂರು ವಿರುದ್ಧ; ಬೆಳಗಾವಿ 4–2 ರಲ್ಲಿ ಮೈಸೂರು ವಿರುದ್ಧ; ಹುಬ್ಬಳ್ಳಿ 5–1 ರಲ್ಲಿ ಬಳ್ಳಾರಿ ವಿರುದ್ಧ ಜಯ ಪಡೆದವು.
ಕೊಡಗು ತಂಡ ಮೊದಲ ದಿನವೇ ಎರಡು ಪಂದ್ಯಗಳನ್ನು ಗೆದ್ದು ನಾಲ್ಕರಘಟ್ಟ ಪ್ರವೇಶಿಸಿತ್ತು. ಶನಿವಾರ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೊಡಗು–ಹಾಸನ, ಎರಡನೇ ಪಂದ್ಯದಲ್ಲಿ ಮೈಸೂರು– ಶಿವಮೊಗ್ಗ ತಂಡಗಳು ಪೈಪೋಟಿ ನಡೆಸಲಿವೆ.