ಕೊವ್ಲೂನ್ (ಹಾಂಗ್ಕಾಂಗ್): ಕಳೆದ ವಾರಾಂತ್ಯದಲ್ಲಿ ಇಂಡೊನೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ ಭಾರತದ ಕಿರಣ್ ಜಾರ್ಜ್ ಅದೇ ಲಯವನ್ನು ಮುಂದುವರಿಸಲು ವಿಫಲರಾಗಿದ್ದಾರೆ. ಅವರು ಹಾಂಗ್ಕಾಂಗ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ಅರ್ಹತಾ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.
ಮಂಗಳವಾರ ನಡೆದ ಎರಡನೇ ಅರ್ಹತಾ ಸುತ್ತಿನಲ್ಲಿ ಅವರು ಮಲೇಷ್ಯಾದ ಜುನ್ ಹಾವೊ ಲಿಯೋಂಗ್ ಎದುರು 20–22, 21–14, 14–21 ರಿಂದ ಪರಾಜಿತರಾದರು. ಅರ್ಹತಾ ಹಂತದ ಮೊದಲ ಸುತ್ತಿನಲ್ಲಿ ಅವರು ಚೀನಾ ತೈಪೆಯ ಯು ಜೆನ್ ಚಿ ಅವರನ್ನು 21–15, 21–17 ರಿಂದ ಸೋಲಿಸಿದ್ದರು.
ಮಿಥುನ್ ಮಂಜುನಾಥ್ ಮತ್ತು ರವಿ ಅವರೂ ಅರ್ಹತಾ ಹಂತದಲ್ಲೇ ಹೊರಬಿದ್ದರು. ಇವರಿಬ್ಬರೂ ಹಾಂಗ್ಕಾಂಗ್ನ ಜೇಸನ್ ಗುಣವಾನ್ ಅವರಿಗೆ ಸೋತರು. ಮಿಥುನ್ ಮೊದಲ ಸುತ್ತಿನಲ್ಲೇ ಜೇಸನ್ ಅವರಿಗೆ 20–22, 15–21ರಲ್ಲಿ ಮಣಿದರೆ, ರವಿ ಎರಡನೇ ಅರ್ಹತಾ ಸುತ್ತಿನಲ್ಲಿ 15–21, 14–21ರಲ್ಲಿ ಮಣಿದರು.
ಭಾರತದ ಮಾಳವಿಕಾ ಬನ್ಸೋಡ್ ಅವರು ಮಹಿಳೆಯರ ಸಿಂಗಲ್ಸ್ ಪ್ರಧಾನ ಸುತ್ತಿಗೆ ಅರ್ಹತೆ ಪಡೆದರು. ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಅವರ ಎದುರಾಳಿ ಥಾಯ್ಲೆಂಡ್ನ ಪಿಚಮೊನ್ ಒಪಟ್ನಿಪುತ್ ಗಾಯಾಳಾಗಿ ಪಂದ್ಯ ಬಿಟ್ಟುಕೊಟ್ಟರು.
ಭಾರತದ ಡಬಲ್ಸ್ ಜೋಡಿಯಾದ ಟ್ರೀಸಾ ಜೋಳಿ ಮತ್ತು ಪುಲ್ಲೇಲ ಗಾಯತ್ರಿ ಗೋಪಿಚಂದ್ ಅವರು ಟೂರ್ನಿಯ ಎರಡನೇ ಸುತ್ತನ್ನು ತಲುಪಿದರು. ಅವರು ನೆದರ್ಲೆಂಡ್ಸ್ನ ಡೆಬೊರಾ ಜಿಲ್ಲೆ ಮತ್ತು ಚೆರಿಲ್ ಸೀನೆನ್ ಅವರನ್ನು 21–15, 16–21, 21–16 ರಿಂದ ಸೋಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.