ನವದೆಹಲಿ: ಚೀನಾದ ಜೀ ಲೀ ಅವರನ್ನು ಪ್ರಯಾಸದಿಂದ ಮಣಿಸಿದ ಭಾರತದ ಪ್ರಜ್ಞೇಶ್ ಗುಣೇಶ್ವರನ್ ಅವರು ನಿಂಗ್ಬೊ ಚಾಲೆಂಜರ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಪ್ರಜ್ಞೇಶ್ 6–3, 2–6, 7–6 (0)ರಿಂದ ಗೆದ್ದರು.
ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಉಳಿದಿರುವ ಭಾರತದ ಏಕೈಕ ಆಟಗಾರ ಪ್ರಜ್ಞೇಶ್. ರಾಮ್ಕುಮಾರ್ ರಾಮನಾಥನ್, ಸುಮಿತ್ ನಗಾಲ್ ಮತ್ತು ಸಾಕೇತ್ ಮೈನೇನಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಮುಂದಿನ ಪಂದ್ಯದಲ್ಲಿ ಪ್ರಜ್ಞೇಶ್ ಅವರು ಯಾಂಗ್ಸೆಂಗ್ ಚುಂಗ್ ಅವರನ್ನು ಎದುರಿಸಲಿದ್ದಾರೆ.
ರಾಮ್ಕುಮಾರ್–ನಗಾಲ್ ಜೋಡಿಗೆ ಸೋಲು: ರಾಮ್ಕುಮಾರ್ ರಾಮನಾಥನ್ ಮತ್ತು ಸುಮಿತ್ ನಗಾಲ್ ಜೋಡಿ ಡಬಲ್ಸ್ ವಿಭಾಗದಲ್ಲೂ ಸೋತು ಹೊರಬಿದ್ದರು. ಆದರೆ ಸಾಕೇತ್ ಮೈನೇನಿ ಮತ್ತು ಎನ್.ಶ್ರೀರಾಮ್ ಬಾಲಾಜಿ ಜೋಡಿ ಹಿರೋಕಿ ಮೊರಿಯಾ ಮತ್ತು ರುಬಿನ್ ಸ್ಟಾಥಮ್ ಜೋಡಿ ವಿರುದ್ಧ 6–0. 6–3ರಿಂದ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.