ಬೆಂಗಳೂರು: ‘ಸಹಾಯಕ ಗ್ರಂಥಪಾಲಕ, ಗ್ರಂಥಾಲಯ ಸಹಾಯಕರು ಮತ್ತು ಗ್ರಂಥಾಲಯ ಕಿರಿಯ ಸಹಾಯಕರ ನೇಮಕಾತಿ ಅಧಿಸೂಚನೆ ಕಾನೂನು ಬಾಹಿರ’ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ರಿಟ್ ಅರ್ಜಿಗೆ ಸಂಬಂಧಿಸಿದಂತೆ ತಕ್ಷಣವೇ ವಿವರ ನೀಡಲು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗೆ ಅಡ್ವೊಕೇಟ್ ಜನರಲ್ ಕಚೇರಿ ಸೂಚಿಸಿದೆ.
‘ಆಯ್ಕೆ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಕಳೆದ ವರ್ಷ ಹೊರಡಿಸಲಾಗಿರುವ ಅಧಿಸೂಚನೆ ಸಂವಿಧಾನದ 371ನೇ ವಿಧಿಯ ಉಲ್ಲಂಘನೆಯಾಗಿದೆ. ಆದ್ದರಿಂದ ಈ ನೇಮಕಾತಿಯನ್ನು ರದ್ದುಗೊಳಿಸಬೇಕು’ ಎಂಬುದು ಅರ್ಜಿದಾರರ ಆಕ್ಷೇಪ.
ವಿಜಯಪುರದ ಜಲನಗರ ನಿವಾಸಿ ಎಂ.ಆರ್.ಚೈತನ್ಯ ಎಂಬುವರು ಸಲ್ಲಿಸಿರುವ ಈ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ. ಶ್ರೀನಿವಾಸೇಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿದ್ದು ಪ್ರತಿವಾದಿಯಾದ ವಿಧಾನಸಭೆ ಸಚಿವಾಲಯದ ಕಾರ್ಯ
ದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.
ಈ ನೋಟಿಸ್ ಅನ್ವಯ ಸರ್ಕಾರಿ ವಕೀಲ ಇ.ಎಸ್. ಇಂದಿರೇಶ್ ಮಾರ್ಚ್ 5ರಂದು ಸಚಿವಾಲಯದ ಕಾರ್ಯದರ್ಶಿ ಎ.ಎಸ್.ಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ಗೆ ಆಕ್ಷೇಪಣೆ ಸಲ್ಲಿಸಬೇಕಿದ್ದು ಸೂಕ್ತ ವಿವರಣೆ ನೀಡುವಂತೆ ಸೂಚಿಸಿದ್ದಾರೆ.