ಬೆಂಗಳೂರು: ಬೆಂಗಳೂರು ದಕ್ಷಿಣ ತಂಡವು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ಜಿಎಫ್ಐ) ರಾಜ್ಯಮಟ್ಟದ 19 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಬುಧವಾರ ಚಾಂಪಿಯನ್ ಆಗಿ ಹೊರಹೊಮ್ಮಿತು. ಬೌರಿಂಗ್ ಇನ್ಸ್ಟಿಟ್ಯೂಟ್ ಆವರಣದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಆ ತಂಡವು ಬೆಂಗಳೂರು ಉತ್ತರ ತಂಡವನ್ನು 2–0ಯಿಂದ ಮಣಿಸಿತು.
ವಿಜೇತ ತಂಡದ ನಿನಾದ್ ರವಿ ಸಿಂಗಲ್ಸ್ (ಬೆಸ್ಟ್ ಆಫ್ 9) ವಿಭಾಗದಲ್ಲಿ ಬೆಂಗಳೂರು ಉತ್ತರ ತಂಡದ ಕಮಲಾಕಣ್ಣನ್ ಎದುರು 6–2ರಿಂದ ಗೆದ್ದರು. ಬಳಿಕ ನಿನಾದ್ ಅವರು ಎ.ದೀಪಕ್ ಜೊತೆಗೂಡಿ ಡಬಲ್ಸ್ ವಿಭಾಗದಲ್ಲಿ ಗೊವಿನ್ ಸೆಹವಾಗ್–ನಿತಿನ್ ಗೌಡ ಜೋಡಿಯನ್ನು 6–1ರಿಂದ ಸೋಲಿಸಿದರು.
ಎಸ್ಜಿಎಫ್ಐ ರಾಷ್ಟ್ರೀಯ ಟೂರ್ನಿಯು ಡಿಸೆಂಬರ್ 24ರಿಂದ ನವದೆಹಲಿಯಲ್ಲಿ ನಡೆಯಲಿದೆ.
ನಿನಾದ್ ರವಿ, ಎ.ದೀಪಕ್, ಕಮಲಾಕಣ್ಣನ್, ಪ್ರೀತ್ ಸತ್ಯಮೂರ್ತಿ ಹಾಗೂ ಗೊವಿನ್ ಸೆಹವಾಗ್ ಅವರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.