ಬೆಂಗಳೂರು: ಉತ್ತಮ ಸಾಮರ್ಥ್ಯ ತೋರಿದ ಕರ್ನಾಟಕದ ಜೈನಾಹ್ ಅಂಬರ್ ಸಲಾರ್ ಮತ್ತು ಆರಾಧ್ಯ ದ್ವಿವೇದಿ ಅವರು ಎಐಟಿಎ 14 ವರ್ಷದೊಳಗಿನವರ ಸಿಎಸ್7 ಟೆನಿಸ್ ಟೂರ್ನಿಯ ಕ್ರಮವಾಗಿ ಬಾಲಕಿಯರ ಮತ್ತು ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ) ಆಶ್ರಯದಲ್ಲಿ ನಡೆದ ಟೂರ್ನಿಯ ಬಾಲಕಿಯರ ವಿಭಾಗದ ಫೈನಲ್ನಲ್ಲಿ ಶುಕ್ರವಾರ ಜೈನಾಹ್ 6-7, 6-1, 7-6ರಿಂದ ತಮಿಳುನಾಡಿನ ದಿಯಾ ರಮೇಶ್ ಅವರನ್ನು ಮಣಿಸಿದರು. ಜೈನಾಹ್ ಇಲ್ಲಿ ಮೊದಲ ಶ್ರೇಯಾಂಕ ಪಡೆದಿದ್ದರು.
ಮೊದಲ ಸೆಟ್ ಸೋತರೂ ಎದೆಗುಂದದ 13 ವರ್ಷದ ಜೈನಾಹ್, ಎರಡು ಮತ್ತು ನಿರ್ಣಾಯಕ ಮೂರನೇ ಸೆಟ್ಗಳನ್ನು ತಮ್ಮದಾಗಿಸಿಕೊಂಡರು.
ಎರಡನೇ ಶ್ರೇಯಾಂಕದ ಆರಾಧ್ಯ ಅವರು ಬಾಲಕರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ 7-6, (4), 6-3ರಿಂದ ಅಗ್ರಶ್ರೇಯಾಂಕದ ಆಟಗಾರ ಮಣಿಪುರದ ಎಸ್. ಅಶ್ವಜೀತ್ ಸವಾಲು ಮೀರಿದರು. ಈ ತಿಂಗಳ ಆರಂಭದಲ್ಲಿ ಆರಾಧ್ಯ 14 ವರ್ಷದೊಳಗಿನವರ ಸಿಎಸ್3 ವಿಭಾಗದಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.