ಚೆನ್ನೈ: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಅವರದ್ದೇ ನೆಲದಲ್ಲಿ ಮಣಿಸುವುದು ಕಷ್ಟಕರವಾಗಿದ್ದು, ನಾಯಕ ರೋಹಿತ್ ಶರ್ಮಾ ವಿಕೆಟ್ ನಿರ್ಣಾಯಕವೆನಿಸಲಿದೆ ಎಂದು ನ್ಯೂಜಿಲೆಂಡ್ನ ಎಡಗೈ ಸ್ಪಿನ್ ಬೌಲರ್ ಮಿಚೆಲ್ ಸ್ಯಾಂಟನರ್ ಹೇಳಿದ್ದಾರೆ.
ಟೂರ್ನಿಯಲ್ಲಿ ಈವರೆಗಿನ ಪಂದ್ಯಗಳಲ್ಲಿ ಪರಿಸ್ಥಿತಿಯನ್ನು ಗ್ರಹಿಸುವಲ್ಲಿ ನ್ಯೂಜಿಲೆಂಡ್ ಆಟಗಾರರು ಯಶಸ್ವಿಯಾಗಿದ್ದಾರೆ. ಭಾರತ ವಿರುದ್ಧದ ಪಂದ್ಯದಲ್ಲೂ ಪರಿಸ್ಥಿತಿಯನ್ನು ಗ್ರಹಿಸುವುದು ಮಹತ್ವದೆನಿಸಲಿದೆ ಎಂದು ಅವರು ಹೇಳಿದ್ದಾರೆ.
ಏಕದಿನ ವಿಶ್ವಕಪ್ನಲ್ಲಿ ಭರ್ಜರಿ ಆರಂಭ ಪಡೆದಿರುವ ನ್ಯೂಜಿಲೆಂಡ್, ಆಡಿರುವ ನಾಲ್ಕು ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಹಮದಾಬಾದ್ನಲ್ಲಿ ಇಂಗ್ಲೆಂಡ್ ವಿರುದ್ಧ 9 ವಿಕೆಟ್ ಮತ್ತು ಹೈದರಾಬಾದ್ನಲ್ಲಿ ನೆದರ್ಲೆಂಡ್ಸ್ ವಿರುದ್ಧ 99 ರನ್ ಅಂತರದ ಜಯ ಗಳಿಸಿತು. ಬಳಿಕ ಚೆನ್ನೈಯಲ್ಲಿ ಬಾಂಗ್ಲಾದೇಶ ವಿರುದ್ಧ ಎಂಟು ವಿಕೆಟ್ ಮತ್ತು ಅಫ್ಗಾನಿಸ್ತಾನ ವಿರುದ್ಧ 149 ರನ್ ಅಂತರದ ಜಯ ದಾಖಲಿಸಿದೆ.
ಭಾರತವನ್ನು ತವರಿನಲ್ಲಿ ಮಣಿಸುವುದು ಸವಾಲಿನಿಂದ ಕೂಡಿರಲಿದೆ. ಧರ್ಮಶಾಲಾದ ಪಿಚ್ ವೇಗ ಹಾಗೂ ಬೌನ್ಸ್ ಸ್ನೇಹಿ ಆಗಿರಲಿದೆ ಎಂದು ಅವರು ಅವಲೋಕಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಕಟ್ಟಿ ಹಾಕುವುದು ಅತಿ ಮುಖ್ಯ. ಹಾಗಾಗಿ ಪವರ್ಪ್ಲೇ ನಿರ್ಣಾಯಕವೆನಿಸಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯ ಅಕ್ಟೋಬರ್ 22 ಭಾನುವಾರದಂದು ಧರ್ಮಶಾಲಾದಲ್ಲಿ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.