ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಪೋಡುಗಳಲ್ಲಿ ವಾಸಿಸುವ ಸೋಲಿಗ ಜನರು ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ಪುರಾಣಿಪೋಡು ಸರ್ಕಾರಿ ಆಶ್ರಮ ಶಾಲಾ ಮಕ್ಕಳು, ಬುಡಕಟ್ಟು ಜನರ ಮನೆ ಮನೆಗೆ ತೆರಳಿ ಸೋಮವಾರ ಮತದಾನ ಜಾಗೃತಿ ಅಭಿಯಾನ ನಡೆಸಿದರು.
ತಾಲ್ಲೂಕು ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸ್ವೀಪ್ ಕಾರ್ಯಕ್ರಮದಲ್ಲಿ ಮಕ್ಕಳು ಡೋಲು, ಜಾಗಟೆ ಮತ್ತು ತಮಟೆ ಬಡಿಯುತ್ತ ಮಹಿಳೆಯರಿಗೆ ಮತದಾನದ ಮಾಡುವ ಅಗತ್ಯವನ್ನು ತಿಳಿಸಿದರು.
ಇಒ ಬಿ.ಎಸ್.ರಾಜು ಮಾತನಾಡಿ, ‘ತಾಲ್ಲೂಕಿನ ಅರಣ್ಯದ ನಡುವೆ ಹತ್ತಾರು ಪೋಡುಗಳಿವೆ. ಚುನಾವಣೆಯಲ್ಲಿ ಮತಗಟ್ಟೆಗೆ ತೆರಳಲು ಎಲ್ಲ ವ್ಯವಸ್ಥೆ ಮಾಡಲಾಗಿದೆ’ ಎಂದರು.
ಹನೂರು, ಯಳಂದೂರು ಮತ್ತು ಚಾಮರಾಜನಗರ ತಾಲ್ಲೂಕುಗಳಿಗೆ ಮತದಾರರು ಹಂಚಿಕೆಯಾಗಿದ್ದಾರೆ. ಆದರೂ, ಮತ ಚಲಾಯಿಸಲು ಅಗತ್ಯ ಇರುವ ನೆರವನ್ನು ಗಿರಿವಾಸಿಗಳಿಗೆ ಕಲ್ಪಿಸಲಾಗಿದೆ. ಅವರ ಮಕ್ಕಳ ಮೂಲಕವೇ ಮತದಾನ ಜಾಗೃತಿ ಅಭಿಯಾನ ನಡೆಸಿ ಮತದಾನದ ಪ್ರಮಾಣ ಹೆಚ್ಚಿಸುವಂತೆ ಮಾಡಲಾಗುವುದು ಎಂದು ಹೇಳಿದರು.
ವಸತಿ ನಿಲಯದ ವಾರ್ಡನ್ ಬೊಮ್ಮಯ್ಯ, ಬೋಜಗೌಡ ಮತ್ತು ಗ್ರಾ.ಪಂ.ಸದಸ್ಯರು ಹಾಗೂ ಗ್ರಾಮೀಣರು ಹಾಜರಿದ್ದರು.