ಬೆಂಗಳೂರು: ‘ನೇಕಾರರ ಅಭಿವೃದ್ಧಿಗೆ ಸಂಬಂಧಿಸಿದಂತೆ ರೂಪಿಸಲಾಗಿರುವ ಯೋಜನೆಗಳಲ್ಲಿರುವ ಲೋಪಗಳನ್ನು ಸರಿಪಡಿಸಲು ಈ ವಲಯದ ತಜ್ಞರು ಮತ್ತು ಅಧಿಕಾರಿಗಳ ಜೊತೆಗೆ ಶೀಘ್ರವೇ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ರಾಜ್ಯದ ನೇಕಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಂಗಳವಾರ ಸಭೆ ನಡೆಸಿದ ಮುಖ್ಯಮಂತ್ರಿ, ನೇಕಾರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು.
ನೇಕಾರರ ಪರಿಸ್ಥಿತಿ ಬಹುತೇಕ ಸಂದ ರ್ಭದಲ್ಲಿ ರೈತರಿಗಿಂತ ದುಸ್ತರವಾಗಿದೆ. ಸಂಕಷ್ಟಕ್ಕೆ ಸಿಲುಕಿದ ಕೆಲವು ಕುಟುಂಬಗಳ ಸದಸ್ಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುಟುಂಬಗಳ ಬವಣೆಗಳನ್ನು ನಿವಾರಿ ಸಲು ಸರ್ಕಾರ ಬದ್ಧ’ ಎಂದರು.
ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎನ್.ಎಸ್. ಪ್ರಸಾದ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎ.ವಿ. ರಮಣರೆಡ್ಡಿ, ನೇಕಾರರ ಸಂಘದ ಅಧ್ಯಕ್ಷ ಶಿವಲಿಂಗ. ಜಿ. ಟಿರಕಿ ಮತ್ತಿತರರು ಸಭೆಯಲ್ಲಿದ್ದರು.
ಮಾರುಕಟ್ಟೆ ಮಧ್ಯಪ್ರವೇಶಕ್ಕೆ ಸೂಚನೆ: ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರ ಸಂಕಷ್ಟಕ್ಕೆ ಧಾವಿಸಿರುವ ರಾಜ್ಯ ಸರ್ಕಾರ, ಪ್ರತಿ ಕ್ವಿಂಟಲ್ ಭತ್ತವನ್ನು ₹ 1,600ನಂತೆ ಖರೀದಿಸಲು ನಿರ್ಧರಿಸಿದೆ.