ಬೆಂಗಳೂರು: ‘ನರೇಂದ್ರ ಮೋದಿಗೆ ಓಟು ಹಾಕಿದರೆ ದೇಶದಲ್ಲಿ ಜಾತ್ಯತೀತ ಶಕ್ತಿಗಳಿಗೆ ಉಳಿಗಾಲವಿಲ್ಲ. ಬಿಜೆಪಿಗೆ ಮತ ಹಾಕುವವರು ಮುಸ್ಲಿಮರೇ ಅಲ್ಲ’ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಆಲ್ ಇಂಡಿಯಾ ಜಮಿಯತುಲ್ ಮನ್ಸೂರ್ (ಕರ್ನಾಟಕ) ಸಂಘಟನೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಬಾರಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರದಂತೆ ಮುಸ್ಲಿಮರು ಎಚ್ಚರ ವಹಿಸಬೇಕು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮೋದಿ ಸೋಲಿಸುವ ಪಣ ತೊಡಬೇಕು. ನಮ್ಮ ಸಮುದಾಯದವರು ಜಾತ್ಯತೀತ ಪಕ್ಷಕ್ಕೆ ಮತ ಹಾಕಿದರೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲದು’ ಎಂದರು.
ಸಂಘಟನೆಯ ವಿವಿಧ ಬೇಡಿಕೆ ಈಡೇರಿಸಬೇಕೆಂದು ಕೋರಿ ಮನವಿ ಪತ್ರ ಸಲ್ಲಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಜಮೀರ್, ‘ಸಮುದಾಯದ ಏಳಿಗೆಗೆ ಸದಾ ಸಿದ್ಧ. ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ’ ಎಂದರು.
‘ಮನ್ ಕಿ ಬಾತ್ ಬೇಡ, ಕಾಮ್ ಕಿ ಬಾತ್ ಬೇಕು’
‘ದೇಶಕ್ಕೆ ಅಚ್ಛೇ ದಿನ್ ತರುವುದಾಗಿ ಹೇಳಿ ನರೇಂದ್ರ ಮೋದಿ ಪ್ರಧಾನಿಯಾದರು. ವಿದೇಶದಲ್ಲಿರುವ ಕಪ್ಪು ಹಣ ತರುವುದಾಗಿ ಹೇಳಿದ್ದರೂ, ಈವರೆಗೆ ನೈಯಾ ಪೈಸೆ ತಂದಿಲ್ಲ. ನಮಗೆ ‘ಮನ್ ಕಿ ಬಾತ್’ ಬದಲು ‘ಕಾಮ್ ಕಿ ಬಾತ್’ ಬೇಕು’ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
‘ಬಿಜೆಪಿ ಮುಖಂಡರ ಬಳಿ ಕಾಳಧನವಿದೆ. ಅದನ್ನು ಕೇಂದ್ರ ಸರ್ಕಾರ ಹೊರಗೆಳೆದಿಲ್ಲ. ನೋಟು ರದ್ದತಿ ಮೂಲಕ ಮೋದಿ ಅವರು ದೇಶದ ಆರ್ಥಿಕತೆಗೆ ಹೊಡೆತ ನೀಡಿದರು’ ಎಂದು ದೂರಿದರು.