ಕೆಂಪಾಪುರ: ಚರಂಡಿ ನೀರು ರಸ್ತೆಗೆ

ಹೆಸರಘಟ್ಟ: ಚಿಕ್ಕಬಾಣಾವರ ಗ್ರಾಮದ ಕೆಂಪಾಪುರ ಮುಖ್ಯರಸ್ತೆಯಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.
ಒಂದು ತಿಂಗಳಿನಿಂದ ಚರಂಡಿಗೆ ಮಣ್ಣು ಬಿದ್ದು ಕಲುಷಿತ ನೀರು ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆಯ ಗುಂಡಿಗಳಲ್ಲಿ ನಿಂತ ನೀರು ದುರ್ನಾತ ಬೀರುತ್ತಿದೆ. ಈ ರಸ್ತೆಯ ಅನತಿ ದೂರದಲ್ಲಿ ಖಾಸಗಿ ಶಾಲೆ ಮತ್ತು ಗ್ರಾಮಸ್ಥರ ಮನೆಗಳಿವೆ. ಶಾಲಾ ಮಕ್ಕಳು ಈ ಗಬ್ಬುವಾಸನೆ ಸೇವಿಸುತ್ತಾ ಓಡಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಗ್ರಾಮದ ನಿವಾಸಿ ಮಹೇಶ್.
‘ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚನ್ನಕೇಶವಮೂರ್ತಿ ಮತ್ತು ಸದಸ್ಯೆ ಸ್ನೇಹಾ ಅವರು ನಿತ್ಯ ಇದೇ ರಸ್ತೆ ಮೇಲೆ ಓಡಾಡುತ್ತಾರೆ. ಆದರೆ ಅವರಿಗೆ ಈ ಸಮಸ್ಯೆಯನ್ನು ಬಗೆಹರಿಸುವ ಕಾಳಜಿಯೇ ಇಲ್ಲವಾಗಿದೆ’ ಎಂದು ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಚರಂಡಿಯ ಕಲುಷಿತ ನೀರಿನಲ್ಲಿ ವಿಪರೀತ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ.ಚರಂಡಿಯ ನೀರು ಸಲೀಸಾಗಿ ಹೋಗುವಂತೆ ಪಂಚಾಯಿತಿ ಕಾಳಜಿ ವಹಿಸಬೇಕು ಎಂದು ಡಾ.ಸಂಜೀವ್ ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಿದ್ಯಾ ಅವರು ಪ್ರತಿಕ್ರಿಯಿಸಿ, ಚರಂಡಿಯಲ್ಲಿ ಬಿದ್ದಿರುವ ಮಣ್ಣುನ್ನು ತೆಗೆಸಲಾಗುವುದು’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.