ಯಲಹಂಕ: ಮತದಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ರೇವಾ ವಿಶ್ವವಿದ್ಯಾಲಯವು ಹಮ್ಮಿ ಕೊಂಡಿರುವ 2ನೇ ಹಂತದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕುಲಪತಿ ಪಿ.ಶ್ಯಾಮರಾಜು,‘1ನೇ ಹಂತದ ಜಾಗೃತಿ ಕಾರ್ಯಕ್ರಮದಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಅಂದಾಜು 1.5 ಲಕ್ಷ ಮನೆಗಳಿಗೆ ಭೇಟಿನೀಡಿ, ಸುಮಾರು 4 ಲಕ್ಷ ಜನರಿಗೆ ಮತದಾನದ ಕುರಿತು ಅರಿವು ಮೂಡಿಸಲಾಗಿದೆ’ ಎಂದು ತಿಳಿಸಿದರು.
‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ 50ರಷ್ಟು ಮತದಾನವಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ 80ರಿಂದ 90ರಷ್ಟು ಮತದಾನ ಆಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
ಮತದಾನ ಮಾಡಿದರೆ ಮಾತ್ರ ಸಂಬಳ: ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದಿದ್ದರೆ ನಮ್ಮ ವಿ.ವಿ. ಸಿಬ್ಬಂದಿಗೆ ಸಂಬಳ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಮಾನವ ಸಂಪನ್ಮೂಲ ವಿಭಾಗದ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಮತದಾನ ಮಾಡಿರುವುದಕ್ಕೆ ಪುರಾವೆ ನೀಡಿದರಷ್ಟೇ ಅವರ ಖಾತೆಗೆ ಸಂಬಳ ಹಾಕಲಾಗುತ್ತದೆ’ ಎಂದರು.
2ನೇ ಹಂತದಜಾಗೃತಿ ಕಾರ್ಯಕ್ರಮದಲ್ಲಿ 1,200 ವಿದ್ಯಾರ್ಥಿಗಳು, ಬೋಧಕರು ಹಾಗೂ ಸಿಬ್ಬಂದಿ ವಾರಕಾಲ ಕೆಲವು ಪ್ರಮುಖ ಸ್ಥಳಗಳಲ್ಲಿ ಲಾವಣಿ, ಜಾನಪದ ಗೀತೆ ಹಾಡುತ್ತ, ಬೀದಿನಾಟಕ ಹಾಗೂ ಚರ್ಚೆಗಳ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಲಿದ್ದಾರೆ.