ಮಂಡ್ಯ: ಜೆಡಿಎಸ್ ಸಮಾವೇಶದ ಅಂಗವಾಗಿ ಸೋಮವಾರ ಒಂದು ಲಕ್ಷಕ್ಕೂ ಅಧಿಕ ಜನರು ನಗರಕ್ಕೆ ಬಂದಿದ್ದರು. ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಡುಕರ ಹಾವಳಿ ವಿಪರೀತವಾಗಿತ್ತು. ಮೆರವಣಿಗೆ ವೇಳೆ ಮದ್ಯದ ವಾಸನೆ ಮೂಗಿಗೆ ರಾಚಿತು.
ಬಾರ್, ವೈನ್ ಶಾಪ್ಗಳು ತುಂಬಿ ತುಳುಕುತ್ತಿದ್ದವು. ಹೆದ್ದಾರಿಯಲ್ಲಿ ಮದ್ಯದ ಬಾಟಲಿಗಳು ಚೆಲ್ಲಾಡುತ್ತಿದ್ದವು. ಕಲಾಮಂದಿರದ ಬಳಿ ಹಲವರು ಸಾಲಾಗಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದರು. ಸಮೀಪದಲ್ಲೇ ಬಸ್ ನಿಲ್ದಾಣವಿದ್ದು ಈ ದೃಶ್ಯಗಳನ್ನು ಕಂಡ ಜನರಿಗೆ ಕಿರಿಕಿರಿ ಉಂಟಾಯಿತು.
ಚಾಲಕರ ಅಸಮಾಧಾನ: ಬೆಂಗಳೂರು, ರಾಮನಗರ, ಮೈಸೂರು ಜಿಲ್ಲೆಗಳಿಂದಲೂ ಜನರನ್ನು ಕರೆತಂದಿರುವ ವಿಚಾರ ಬೆಳಕಿಗೆ ಬಂತು. ಬೆಂಗಳೂರಿನಿಂದ ಕ್ಯಾಬ್ಗಳಲ್ಲಿ ಜನರನ್ನು ಕರೆತಂದಿದ್ದು, ಚಾಲಕರಿಗೆ ಬಾಡಿಗೆ ಹಣ ಕೊಡದ ಕಾರಣ ಕಾರ್ಯಕರ್ತರ ಮೇಲೆ ಜಗಳಕ್ಕೆ ಇಳಿದಿದ್ದರು.
ಬೆಂಗಳೂರಿನಿಂದ ಕಾರ್ಯಕರ್ತರನ್ನು ಕರೆತಂದಿದ್ದ ಕ್ಯಾಬ್ಗಳು
‘ಬೆಂಗಳೂರಿನಿಂದ ಕ್ಯಾಬ್ಗಳಲ್ಲಿ ಜನರು ಬಂದಿದ್ದಾರೆ. ಮಂಡ್ಯಕ್ಕೆ ಬಿಡುವ ಒಪ್ಪಂದವಾಗಿದೆ, ವಾಪಸ್ ತೆರಳುವುದಕ್ಕೆ ಮಾತನಾಡಿಲ್ಲ. ಬೆಳಿಗ್ಗೆ 11 ಗಂಟೆಯಿಂದ ಕಾಯುತ್ತಿದ್ದೇವೆ, ಮಧ್ಯಾಹ್ನ 2 ಗಂಟೆಯಾದರೂ ಬಾಡಿಗೆ ಹಣ ಕೊಟ್ಟಿಲ್ಲ. ಬೇರೆ ಮುಖಂಡರು ಕೊಡುತ್ತಾರೆ ಎಂದು ಹೇಳುತ್ತಿದ್ದಾರೆ. ಯಾವ ಮುಖಂಡರೂ ಪತ್ತೆ ಇಲ್ಲ’ ಎಂದು ಕ್ಯಾಬ್ ಚಾಲಕರು ಅಸಮಾಧಾನ ವ್ಯಕ್ತಪಡಿಸಿದರು.