ಬಾಗಲಕೋಟೆ:ಸಾಗುವಳಿ ಭೂಮಿಯಲ್ಲಿ ನಿಯೋಜಿತ ರಾಜ್ಯ ಹೆದ್ದಾರಿ ನಿರ್ಮಾಣ ವಿರೋಧಿಸಿ ಕೋಟೆಕಲ್ ಹಾಗೂ ಮುರಡಿ ಗ್ರಾಮದ ರೈತರು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಗುಳೇದಗುಡ್ಡ ತಾಲ್ಲೂಕಿನ ಕೋಟೆಕಲ್ ಹಾಗೂ ಮುರಡಿ ಗ್ರಾಮದ ಮೂಲಕ ರಾಜ್ಯ ಹೆದ್ದಾರಿ ನಿರ್ಮಾಣದ ಯೋಜನೆ ಹೊಂದಿದ್ದು, ಇದರಿಂದಈ ಎರಡೂ ಗ್ರಾಮಗಳ ಕೃಷಿ ಕುಟುಂಬಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಫಲವತ್ತಾದ ಕೃಷಿ ಭೂಮಿಯಲ್ಲಿ ರಸ್ತೆ ನಿರ್ಮಿಸಲು ಅನುಮತಿ ನೀಡಬಾರದು ಎಂದು ಮುಖಂಡ ಶಶಿಧರ ದೇಸಾಯಿ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಶಿಧರ ಕುರೇರ ಅವರಿಗೆ ಮನವಿ ಸಲ್ಲಿಸಲಾಯಿತು.
‘ಈ ಎರಡೂ ಗ್ರಾಮಗಳ 8 ಸಾವಿರ ಜನಸಂಖ್ಯೆಕೃಷಿಯನ್ನೇ ಆಶ್ರಯಿಸಿದೆ. ಇಲ್ಲಿನ ಜನ ಬಹುತೇಕ ಅನಕ್ಷರಸ್ಥರಾಗಿದ್ದು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಫಲವತ್ತಾದ ಜಮೀನುಗಳೇ ಅವರ ಜೀವನಕ್ಕೆ ಆಧಾರವಾಗಿವೆ. ಕೃಷಿ, ಉದ್ಯೋಗ ಹೊರತುಪಡಿಸಿ ಮತ್ತಾವ ಉದ್ಯೋಗವೂ ತಿಳಿದಿಲ್ಲ’ ಎಂದು ತಮ್ಮ ಅಳಲನ್ನು ತೋಡಿಕೊಂಡರು.