ಕೊಪ್ಪಳ: ಹಲಗೇರಿ ದ್ಯಾಮಮ್ಮನ ಜಾತ್ರೆಯ ನಿಮಿತ್ತ ಶುಕ್ರವಾರ ಬೆಳಿಗ್ಗೆ ದಶಮಿ ದಿಂಡಿನಲ್ಲಿ ದ್ಯಾಮಮ್ಮನ ಮೂರ್ತಿ ಮರೆವಣಿಗೆಯೂ ಸಕಲ ವಾದ್ಯಗಳೊಂದಿಗೆ ಹಲಗೇರಿ ಗ್ರಾಮದ ಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ 4ಕ್ಕೆ ದ್ಯಾಮಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದಶಮಿದಿಂಡಿನಲ್ಲಿ ಬೆಳಿಗ್ಗೆ 6ಕ್ಕೆ ಆರಂಭವಾದ ದ್ಯಾಮಮ್ಮನ ಮೂರ್ತಿ ಮೆರವಣಿಗೆಯೂ ಸಂಜೆ 6ರ ವರೆಗೂ ಸಾಗಿತು. ದಾರಿಯುದ್ದಕ್ಕೂ ಮಹಿಳೆಯರು ದೇವಿಗೆ ಕಾಯಿ, ಕರ್ಪೂರ್, ಹೂವು ಸಲ್ಲಿಸಿ ತಾಯಿಯ ಕೃಪೆಗೆ ಪಾತ್ರರಾದರು. ನಂತರ ಮೆರವಣಿಗೆಯೂ ಗ್ರಾಮದ ವಿವಿಧ ಬೀದಿಗಳ ಮೂಲಕ ದೇವಸ್ಥಾನ ತಲುಪಿತು.
ಮೆರಗು ನೀಡಿದ ವಾದ್ಯಗಳು: ಹಲಗೇರಿ ಗ್ರಾಮದಲ್ಲಿ ಸುಮಾರು ಮೂರವರೇ ದಶಕಗಳ ನಂತರ ಆಚರಿಸುತ್ತಿರುವ ಅಮ್ಮನ ಜಾತ್ರೆಗೆ ಪ್ರತಿಯೊಂದು ಮನೆಯೂ ಮದುವಣ ಗಿತ್ತಿಯಂತೆ ಸಿಂಗಾರಗೊಂಡಿದ್ದು, ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.
ದ್ಯಾಮಮ್ಮನ ಮೂರ್ತಿ ಮೆರವಣಿಗೆಯಲ್ಲಿ ನಂದಿ ಕೋಲು, ಡೊಳ್ಳು ಕುಣಿತ, ಗೊಂಡಬಾಳ ಗ್ರಾಮದಿಂದ ಕರೆತರಲಾಗಿದ್ದ ಕೋಲಾಟ, ಮೂರ್ತಿ ಮೆರವಣಿಗೆಗೆ ಮೆರಗು ನೀಡಿದವು. ಕೆಲ ಯುವಕರು ಉರಿಯುವ ಬಿಸಿಲನ್ನು ಲೆಕ್ಕಿಸದೆ ನಂದಿ ಕೋಲು ಹಾಗೂ ಕೋಲಾಟದಲ್ಲಿ ಹೆಜ್ಜೆ ಹಾಕುವುದರ ಮೂಲಕ ನೋಡುಗರ ಕಣ್ಮನ ಸೆಳೆದರು.
ಒಂಭತ್ತು ದಿನಗಳ ಕಾಲ ವಿಂಜೃಭಣೆಯಿಂದ ಜರುಗಲಿರುವ ದ್ಯಾಮಮ್ಮ ದೇವಿ ಜಾತ್ರೆಯಲ್ಲಿ ನಿತ್ಯ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಮೇ 11ರಂದು ನೂತರ ರಥೋತ್ಸವದ ಕಳಸ, ಹಗ್ಗ ಹಾಗೂ ನಂದಿಕೋಲುಗಳನ್ನು ಗ್ರಾಮದ ವಿವಿಧ ಬೀದಿಗಳ ಮೂಲಕ ದೇವಸ್ಥಾನಕ್ಕೆ ತಲುಪಿಸುವ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀಶಾಂಭವಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ತ ಪರಿಷತ್ತು ಅಧ್ಯಕ್ಷ ರಾಜಶೇಖರ ಅಂಗಡಿ ಹಾಗೂ ಪ್ರಚಾರ ಸಮಿತಿ ಸದಸ್ಯ ದೇವೇಂದ್ರ ಬಳಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.