ಹೆಸರಘಟ್ಟ: ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಹಾಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್ಆರ್) ಎಂಟನೇ ಸಮಿತಿಯ 26ನೇ ಸಭೆಯನ್ನು ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ.ತ್ರಿಲೋಚನ್ ಮೊಹಪಾತ್ರ ಉದ್ಘಾಟಿಸಿದರು.
‘ತಂತ್ರಜ್ಞಾನದ ಬಳಕೆ ಕೃಷಿ ಕ್ಷೇತ್ರದಲ್ಲಿ ಹೆಚ್ಚಾದರೆ ದೇಶ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸುತ್ತದೆ. ಆಹಾರ ವಲಯದಲ್ಲಿ ಅಗ್ರಸ್ಥಾನ ಪಡೆಯಲು ಇದರಿಂದ ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
‘ಬದಲಾಗುತ್ತಿರುವ ಹವಾಮಾನ ಕೃಷಿ ಕ್ಷೇತ್ರಕ್ಕೆ ಬಹು ದೊಡ್ಡ ಸವಾಲು. ಈ ಸವಾಲನ್ನು ಸಮರ್ಥವಾಗಿ ಎದುರಿಸುವ ಅಗತ್ಯವಿದೆ’ ಎಂದುಐಸಿಎಆರ್ ಉಪ ಮಹಾನಿರ್ದೇಶಕ (ಡಿಡಿಜಿ) ಅಳಗಸುಂದರಂ ಹೇಳಿದರು.
ಕೇರಳ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ಕೆ.ಸಿಂಗ್,‘ ಸಂಶೋಧನಾ ಜ್ಞಾನವನ್ನು ಕೃತಿಗಿಳಿಸಿ ನೈಜ ಸವಾಲುಗಳನ್ನು ಎದುರಿಸಬೇಕು’ ಎಂದರು. ‘ಭತ್ತ, ಬಾಳೆ ಕೃಷಿಗೆ ಪ್ರವಾಹದಿಂದ ಹೆಚ್ಚು ಹಾನಿಯಾಗಿದ್ದು ಗಾಳಿ ರಭಸಕ್ಕೆ ಉರುಳದೇ ಇರುವಂತಹ ತಳಿಗಳ ಅಭಿವೃದ್ಧಿ ಅಗತ್ಯ’ ಎಂದರು.
ಕೃಷಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಮತ್ತು ಆರ್ಥಿಕ ಸಲಹೆಗಾರ ಬಿಂಬಾದರ್ ಪ್ರಧಾನ್,ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು, ತೋಟಗಾರಿಕಾ ಇಲಾಖೆಗಳ ನಿರ್ದೇಶಕರು, ರೈತರು ಸಭೆಯಲ್ಲಿ ಭಾಗಿಯಾಗಿದ್ದರು.