ಬೆಂಗಳೂರು: ಸುಟ್ಟುಹೋದ ಕಾರಿಗೆ ಕಟ್ಟಿದ್ದ ತೆರಿಗೆ ಹಣ ಹಿಂತಿರುಗಿಸಲು ಲಂಚ ಪಡೆಯುವಾಗ ಸಿಕ್ಕಿಬಿದ್ದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಆರ್ಟಿಒ) ಆರ್.ಎಂ. ವೆರ್ಣೇಕರ್ ಅವರ ಮಂಗಳೂರಿನ ಮನೆಯಲ್ಲಿ ₹ 70 ಲಕ್ಷ ನಗದು ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ತೆಯಾಗಿದೆ.
ಬೆಂಗಳೂರಿನ ಏರ್ ಷೋ ವೇಳೆ ಕಾರ್ಕಳ ತಾಲೂಕಿನ ವಿಘ್ನೇಶ್ ಎಂಬುವರ ಕಾರು ಸುಟ್ಟುಹೋಗಿತ್ತು. ಕಾರಿಗೆ ಪಾವತಿಸಿದ್ದ ₹65,000 ತೆರಿಗೆ ಹಿಂತಿರುಗಿಸಲು ವೆರ್ಣೇಕರ್ ₹5,000 ಲಂಚ ಕೇಳಿದ್ದರು. ₹4,000 ಪಡೆಯುವಾಗ ಶುಕ್ರವಾರ ಎಸಿಬಿ ಬಲೆಗೆ ಬಿದ್ದಿದ್ದರು. ಬಳಿಕ, ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ಭಾರಿ ಆಸ್ತಿ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಮನೆ, ಫ್ಲ್ಯಾಟ್, ಜಮೀನು,ಉಳಿತಾಯ ಖಾತೆ, ಅನೇಕ ಆಸ್ತಿಗಳ ದಾಖಲೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ. ಇನ್ನೂ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ವೆರ್ಣೇಕರ್, ನಿವೃತ್ತ ಎಸ್ಪಿ ವೆರ್ಣೇಕರ್ ಅವರ ಸೋದರ ಎನ್ನಲಾಗಿದೆ.