ನೆಲಮಂಗಲ: 10 ದಿನಗಳಿಂದ ಬೂದಿ ಹಾಳ್ನಲ್ಲಿ ನಡೆಯುತ್ತಿದ್ದ ಆಯುತಚಂಡಿ ಯಾಗವು 11ನೇ ದಿನವಾದ ಶುಕ್ರವಾರದಂದು ನೂರಾ ಒಂದು ಅಗ್ನಿಕುಂಡಗಳಲ್ಲಿ ಮಹಾಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು.
1,010 ಋತ್ವಿಕರು ಚಂಡಿಹೋಮ ನಡೆಸಿದರು. 15,000 ಕೆ.ಜಿ ಪರಮಾನ್ನ ಪೂರ್ಣಾಹುತಿಗೆ ಸಮರ್ಪಣೆಯಾಯಿತು. ವಿಜಯ ದುರ್ಗಾಪರಮೇಶ್ವರಿ ದೇವಿಗೆ ಮಹಾಮಂಗಳಾರತಿ, ಅನ್ನಸಂತರ್ಪಣೆ, ಆಶೀರ್ವಚನ, ಮಂತ್ರಾಕ್ಷತೆಯೊಂದಿಗೆ ಯಾಗ ಸಂಪನ್ನವಾಯಿತು.
11 ದಿನಗಳಲ್ಲಿ ದುರ್ಗಾಸಪ್ತಶತಿ ಪಾರಾಯಣ, ಒಂದು ಕೋಟಿ ನವಾಕ್ಷರೀ ಮಹಾಮಂತ್ರ ಜಪ, ಕ್ಷೀರ ತರ್ಪಣ, ಪರಮಾನ್ನ ಆಹುತಿ, ಆಜ್ಯಾಹುತಿ, ನವಾವರಣ ಕಲ್ಪೋಕ್ತ ಪೂಜೆ, ದಂಪತಿ, ಸುವಾಸಿನಿ, ಕುಮಾರಿ ಪೂಜೆ, ಅಷ್ವಾವಧಾನ-ಸೇವಾದಿಗಳಿಂದ ಚಂಡಿ ಮಹಾಯಾಗವನ್ನು ನೆರವೇರಿಸಲಾಯಿತು.
40 ಎಕರೆ ಪ್ರದೇಶದಲ್ಲಿ ಯಾಗಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸ್ಥಳದಲ್ಲಿ ಚಂಡಿಕಾ ಪರಮೇಶ್ವರಿ ಮೂರ್ತಿ, ಶೃಂಗೇರಿ ಶ್ರೀಗಳ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. 1,008 ಕಳಸಗಳ ಸ್ಥಾಪನೆ ಮಾಡಲಾಗಿತ್ತು. ನಿತ್ಯವೂ ಹೋಮದ ನಂತರ ಚಂಡೆ–ಮದ್ದಳೆ, ನಗಾರಿಯ ಮಂತ್ರಾಕ್ಷತೆ, ಆನೆಯೊಂದಿಗೆ ದೇವಿಯ ರಥೋತ್ಸವ ನಡೆಸಲಾಗುತ್ತಿತ್ತು. ರಾಜರಾಜೇಶ್ವರಿ ನಗರದ ದಿನೇಶ್ ಗುರೂಜಿ ಅವರ ನೇತೃತ್ವದಲ್ಲಿ, ಉದ್ಯಮಿ ತಿಪ್ಪಣ್ಣ ಅವರ ಪ್ರಾಯೋಜಕತ್ವದಲ್ಲಿ ಯಾಗ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.