ಬೆಂಗಳೂರು: ವಿವಿಧ ಅಕಾಡೆಮಿಗಳ ಅಧ್ಯಕ್ಷರ ಮತ್ತು ಸದಸ್ಯರ ನಾಮ ನಿರ್ದೇಶನಗಳನ್ನು ಸರ್ಕಾರ ರದ್ದುಪಡಿಸಿದ್ದರೂ, ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಮಾಧ್ಯಮ ಅಕಾಡೆಮಿಗಳು ಗುರುವಾರ ಎಂದಿನಂತೆ ಕಾರ್ಯ ನಿರ್ವಹಿಸಿದವು.
ಚಲನಚಿತ್ರ ಅಕಾಡೆಮಿಗೆ ನಾಗತಿಹಳ್ಳಿ ಚಂದ್ರಶೇಖರ್, ಮಾಧ್ಯಮ ಅಕಾಡೆಮಿಗೆ ಪದ್ಮರಾಜ ದಂಡಾವತಿ ಅಧ್ಯಕ್ಷರಾಗಿದ್ದಾರೆ.
‘ಅಧಿಕಾರಕ್ಕೆ ನಾವು ಅಂಟಿಕೊಂಡು ಕುಳಿತಿಲ್ಲ. ಸರ್ಕಾರದಿಂದ ನಮಗೆ ಯಾವುದೇ ಸೂಚನೆ ಬಂದಿಲ್ಲ. ಹೀಗಾಗಿ ಗುರುವಾರವೂ ಕೆಲಸ ಮಾಡಿದ್ದೇವೆ’ ಎಂದು ಎರಡೂ ಅಕಾಡೆಮಿಗಳ ಅಧ್ಯಕ್ಷರು ತಿಳಿಸಿದ್ದಾರೆ.
ಚಲನಚಿತ್ರ ಮತ್ತು ಮಾಧ್ಯಮ ಅಕಾಡೆಮಿ ಹೊರತುಪಡಿಸಿ ಇತರ ಎಲ್ಲ ಅಕಾಡೆಮಿಗಳ ನೇಮಕಾತಿಯನ್ನು ಬಿ.ಎಸ್.ಯಡಿಯೂರಪ್ಪ ಸರ್ಕಾರ ಬುಧವಾರ ರದ್ದುಪಡಿಸಿತ್ತು. ತಾಂತ್ರಿಕ ಕಾರಣಗಳಿಂದಾಗಿ ಈ ಎರಡು ಅಕಾಡೆಮಿಗಳ ಕುರಿತಂತೆ ಆದೇಶದಲ್ಲಿ ಉಲ್ಲೇಖಿಸಿರಲಿಲ್ಲ.
‘ಹೆಚ್ಚಿನ ಅಕಾಡೆಮಿಗಳ ಮಾಹಿತಿಯನ್ನು ಆನ್ಲೈನ್ನಲ್ಲಿ ತರಿಸಿಕೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಂತ್ರಿಕ ಕಾರಣದಿಂದಎರಡು ಅಕಾಡೆಮಿಗಳ ಮಾಹಿತಿ ಪಡೆದಿರಲಿಲ್ಲ. ಅವುಗಳನ್ನು ಗುರುವಾರ ಇಲಾಖೆಗೆ ತಲುಪಿಸಲಾಗಿದೆ.’ ಎಂದು ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.