ಬೆಂಗಳೂರು: ಜಯನಗರದ ಆರ್ಟಿಒ ಕಚೇರಿ ಮೇಲೆ ಶುಕ್ರವಾರ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ₹ 4.11 ಲಕ್ಷ ಹಣ ವಶಪಡಿಸಿಕೊಂಡು ಡಜನ್ಗೂ ಹೆಚ್ಚು ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ.
ಮಧ್ಯವರ್ತಿಗಳ ಬಳಿ ₹ 1.40 ಲಕ್ಷ ಸಿಕ್ಕಿದೆ. ಆರ್ಟಿಒ ಕಚೇರಿಯೊಳಗೆ ಬ್ಯಾಗ್ನಲ್ಲಿ ವಾರಸುದಾರರಿಲ್ಲದೆ ಬಿದ್ದಿದ್ದ ₹ 2.71 ಲಕ್ಷವನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಜಯನಗರ ಆರ್ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಭ್ರಷ್ಟಾಚಾರ ವ್ಯಾಪಕವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆಯಿತು.
ಎಸಿಬಿ ಐಜಿಪಿ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು. ಆರ್ಟಿಒ ಸಂಕೀರ್ಣದಲ್ಲಿರುವ ಕೆಲವು ಮಳಿಗೆಗಳಲ್ಲಿ ಮತ್ತು ಮಧ್ಯವರ್ತಿಗಳ ಬಳಿ ಡಿ.ಎಲ್ ಹಾಗೂ ಆರ್.ಸಿ ಸ್ಮಾರ್ಟ್ಕಾರ್ಡ್ ಸೇರಿದಂತೆ ಅನೇಕ ದಾಖಲೆ ಗಳು ಸಿಕ್ಕಿವೆ. ತನಿಖೆ ಮುಂದುವರಿಯುತ್ತಿದೆ.
ಈ ಹಿಂದೆ, ನಗರದ ಆರ್ಟಿಒ ಕಚೇರಿಯೊಂದರ ಮೇಲೆ ನಡೆದ ದಾಳಿ ಸಮಯದಲ್ಲೂ ಅಂಗಡಿಗಳಿಂದ ಡಿ.ಎಲ್, ಆರ್.ಸಿ ಸ್ಮಾರ್ಟ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.