ಬೆಂಗಳೂರು: ಸಹಕಾರ ಸಂಘದ ಷೇರು ಸಂಗ್ರಹ ಪತ್ರಗಳನ್ನು ಪಡೆಯಲು ಸಹಕಾರ ಸಂಘವೊಂದು ನೀಡಬೇಕಿದ್ದ ₹ 5.50 ಲಕ್ಷ ಲಂಚದಲ್ಲಿ ಮುಂಗಡವಾಗಿ ₹50 ಸಾವಿರ ಪಡೆಯುತ್ತಿದ್ದ ಕೋ ಆಪರೇಟಿವ್ ಸೊಸೈಟಿ ರಿಜಿಸ್ಟ್ರಾರ್ ಕಚೇರಿಯ ಹೆಚ್ಚುವರಿ ರಿಜಿಸ್ಟ್ರಾರ್ ಆರ್. ಶ್ರೀಧರ್ ಹಾಗೂ ಪ್ರಥಮ ದರ್ಜೆ ಸಹಾಯಕಿ ಪುಷ್ಪಲತಾ ‘ಭ್ರಷ್ಟಾಚಾರ ನಿಗ್ರಹ ದಳ’ದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಅಲಿ ಅಸ್ಗರ್ ರಸ್ತೆಯಲ್ಲಿರುವ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಯಲ್ಲಿ ಶ್ರೀಧರ್ ಮತ್ತು ಪುಷ್ಪಲತಾ ಕೆಲಸ ಮಾಡುತ್ತಿದ್ದಾರೆ. ರಾಜಾಜಿನಗರದಲ್ಲಿ ವಿವಿಧೋದ್ದೇಶ ‘ಭಾರತಿ ಸಹಕಾರ ಸಂಘ’ ಸ್ಥಾಪಿಸಿ ಷೇರು ಸಂಗ್ರಹಿಸಲು ಸರ್ಟಿಫಿಕೇಟ್ ನೀಡುವಂತೆ ಲಕ್ಷ್ಮಣ ಈಳಗೇರ ಮನವಿ ಮಾಡಿದ್ದರು. ಇದಕ್ಕೆ ಹೆಚ್ಚುವರಿ ರಿಜಿಸ್ಟ್ರಾರ್ ₹10 ಲಕ್ಷ ಲಂಚ ಕೇಳಿದ್ದರು. ಸತತ ಮನವೊಲಿಕೆ ಬಳಿಕ ₹5 ಲಕ್ಷಕ್ಕೆ ಒಪ್ಪಿಕೊಂಡಿದ್ದರು. ಇದಲ್ಲದೆ, ಪ್ರಥಮ ದರ್ಜೆ ಸಹಾಯಕಿಗೆ ₹50 ಸಾವಿರ ಕೊಡಬೇಕೆಂದು ಮಾತುಕತೆ ಆಗಿತ್ತು ಎಂದು ಎಸಿಬಿ ಮೂಲಗಳು ತಿಳಿಸಿವೆ.
ಅದರಂತೆ, ಮಂಗಳವಾರ ಲಕ್ಷ್ಮಣ ಅವರಿಂದ ಪುಷ್ಪಲತಾ ₹55,000 ಮುಂಗಡ ಸ್ವೀಕರಿಸಿ, ಶ್ರೀಧರ್ ಅವರಿಗೆ ₹50 ಸಾವಿರ ಕೊಟ್ಟು, ತಾವು ₹5 ಸಾವಿರ ಇಟ್ಟುಕೊಂಡಿದ್ದಾಗ ಎಸಿಬಿ ಪೊಲೀಸರ ಬಲೆಗೆ ಬಿದ್ದರು.
53 ವರ್ಷದ ಶ್ರೀಧರ್ 1994ರಲ್ಲಿ ಸೇವೆಗೆ ಸೇರಿದ್ದು, ಇವರು ಹೆಚ್ಚುವರಿ ರಿಜಿಸ್ಟ್ರಾರ್ ಆಗಿ ಬಂದಾಗಿನಿಂದ ಎಷ್ಟು ಫೈಲ್ಗಳನ್ನು ವಿಲೇವಾರಿ ಮಾಡಿದ್ದಾರೆ. ಎಷ್ಟು ಫೈಲ್ಗಳನ್ನು ಬಾಕಿ ಇಟ್ಟುಕೊಂಡಿದ್ದಾರೆ ಎಂಬ ಬಗ್ಗೆ ಎಸಿಬಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಎಸಿಬಿ ಐಜಿಪಿ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ ನೇತೃತ್ವವನ್ನು ಎಸ್ಪಿ ಡಾ. ಸಂಜೀವ್ ಪಾಟೀಲ ವಹಿಸಿದ್ದಾರೆ.