ಬೆಂಗಳೂರು: ಜೈಲಿನಿಂದ ಪರಾರಿಯಾಗಿದ್ದ ಪಶ್ಚಿಮ ಬಂಗಾಳದ ಮಾಲ್ಡಾದ ಸದ್ದಾಂ ಅಲಿಯಾಸ್ ಫೈರೋಜ್ ಶೇಖ್ (22) ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪೊಲೀಸರು ಭಾನುವಾರ ಬಂಧಿಸಿ₹ 2 ಸಾವಿರ ಮುಖಬೆಲೆಯ ₹ 8 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಸೋಮವಾರ ಮಾಲ್ಡಾದ ಸಿಜೆಎಂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಆನಂತರ ವಿಜಯವಾಡದ ಕೋರ್ಟ್ನಲ್ಲಿ ಕರೆತರಲಾಗುವುದು. ಕಳೆದ ವರ್ಷದ ಮಾರ್ಚ್ 31ರಂದು ವಿಶಾಖಪಟ್ಟಣದಲ್ಲಿ₹ 10.20 ಲಕ್ಷ ಮೌಲ್ಯದ ಖೋಟಾನೋಟುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಇದು ಸಂಬಂಧಿಸಿದೆ.
ಮಹಮದ್ ಮಹಬೂಬ್ ಬೇಗ್ ಅಲಿಯಾಸ್ ಅಜರ್ ಬೇಗ್ ಮತ್ತು ಸಯ್ಯದ್ ಇಮ್ರಾನ್ ಎಂಬುವರಿಂದ ಈ ಖೋಟಾ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಬೆಂಗಳೂರಿನಿಂದ ಮಾಲ್ಡಾಗೆ ತೆರಳಿದ್ದಆರೋಪಿಗಳಿಬ್ಬರೂ ಇದನ್ನು ಸದ್ದಾಂನಿಂದ ಪಡೆದಿದ್ದರು. ಮಹಮದ್ ಮತ್ತು ಇಮ್ರಾನ್ ವಿರುದ್ಧ ಹೈದರಾಬಾದ್ನಲ್ಲಿ ಎನ್ಐಎ ಅಧಿಕಾರಿಗಳು 2018ರ ಜೂನ್ 29ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಹಚರರ ಮೂಲಕ ಗಡಿ ಭಾಗಗಳಿಂದ ಖೋಟಾನೋಟುಗಳನ್ನು ಸಂಗ್ರಹಿಸುತ್ತಿದ್ದ ಸದ್ದಾಂ ಅವುಗಳನ್ನು ಬೆಂಗಳೂರು ಮತ್ತು ಸುತ್ತಮುತ್ತ ಚಲಾವಣೆ ಮಾಡು ತ್ತಿದ್ದರು ಎಂದು ಎನ್ಐಎ ಹೇಳಿದೆ.