ಬೆಂಗಳೂರು: ‘ಜೀವಜಲ ಮತ್ತು ಜೀವ ರಕ್ಷಕ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಶುದ್ಧ ಕುಡಿಯುವ ನೀರನ್ನು ಕೊಂಡುಕೊಳ್ಳಲಾಗದ ಕುಟುಂಬಗಳಿಗೆ ಪಂಚಾಯಿತಿ ಸಿಬ್ಬಂದಿಯೇ ನೀರನ್ನು ತಲುಪಿಸಲಿದ್ದಾರೆ’ ಎಂದುಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಮುನೇಗೌಡ ಹೇಳಿದರು.
ಯಲಹಂಕ ಸಮೀಪದ ಬಾಗಲೂರು ಗ್ರಾಮಪಂಚಾಯಿತಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ‘ಜೀವಜಲ ಮತ್ತು ಜೀವರಕ್ಷಕ ಯೋಜನೆ ಅನುಷ್ಠಾನ’ ಕಾರ್ಯಕ್ರಮದ ಉದ್ಘಾಟನೆ ವೇಳೆ ಅವರು ಮಾತನಾಡಿದರು.
‘ವಾರಕ್ಕೊಮ್ಮೆ ಪ್ರತಿ ಮನೆಗಳಿಗೆ ಭೇಟಿ ನೀಡಿ, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಆರೋಗ್ಯ ತಪಾಸಣೆ ನಡೆಸುವುದರ ಜೊತೆಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲು ವ್ಯವಸ್ಥೆ ಮಾಡಲಾಗುವುದು’ ಎಂದರು.
‘ಯೋಜನೆಗಳ ಸೌಲಭ್ಯ ಒದಗಿಸಲು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ, 32 ಕುಟುಂಬಗಳನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕುಟುಂಬಗಳನ್ನು ಗುರುತಿಸಿ, ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮುಂದುವರಿಯಲಿದೆ’ ಎಂದು ಹೇಳಿದರು.
ರಾಜ್ಯ ಪಂಚಾಯತ್ ಪರಿಷತ್ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಕಾರ್ಯಕ್ರಮಉದ್ಘಾಟಿಸಿದರು. ಪಂಚಾಯಿತಿ ವತಿಯಿಂದ ಬಡ ಮತ್ತು ಹಿಂದುಳಿದ ವರ್ಗದವರಿಗೆ ಉಚಿತವಾಗಿ ಹೊಲಿಗೆ ಯಂತ್ರ ಮತ್ತು ನೀರಿನ ಕ್ಯಾನ್ ವಿತರಿಸಲಾಯಿತು.