ಬೆಂಗಳೂರು:ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಯಲಹಂಕದಲ್ಲಿ ಐದು ಹಾಸಿಗೆಯ ಸುಟ್ಟಗಾಯ ಚಿಕಿತ್ಸಾ ಕೇಂದ್ರ ಸ್ಥಾಪಿಸಬೇಕು ಎಂದು ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಸಂಘಟಕರ ಮೂಲಕ ವಿಕ್ಟೋರಿಯಾ ಆಸ್ಪತ್ರೆಯನ್ನು ಕೇಳಿಕೊಂಡಿದೆ. ನಾಲ್ಕು ದಿನ ನಡೆಯುವ ವೈಮಾನಿಕ ಪ್ರದರ್ಶನದಲ್ಲಿ ಯಾವುದೇ ಅನಾಹುತಸಂಭವಿಸಬಾರದು ಎಂದು ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ. ‘ಹಿಂದಿನ ಯಾವ ಪ್ರದರ್ಶನಗಳ ವೇಳೆಯಲ್ಲೂ ಸುಟ್ಟ ಗಾಯ ಚಿಕಿತ್ಸೆಗೆ ತಾತ್ಕಾಲಿಕ ಕೇಂದ್ರ ಸ್ಥಾಪನೆಗೆ ಪ್ರಸ್ತಾಪ ಬಂದಿರಲಿಲ್ಲ. ಈ ಸಲದ ಪ್ರದರ್ಶನದ ಸಂದರ್ಭದಲ್ಲಿ ವಿಶೇಷ ವೈದ್ಯರನ್ನು ನೇಮಿಸುವಂತೆ ಆರೋಗ್ಯ ಅಧೀಕ್ಷಕರನ್ನು ಕೇಳಿಕೊಂಡಿದ್ದೇವೆ. ಇದಕ್ಕಾಗಿ ಪ್ರತ್ಯೇಕ ತಂಡವನ್ನು ರಚಿಸಲಾಗುತ್ತದೆ. ಐದು ಹಾಸಿಗೆಯ ವ್ಯವಸ್ಥೆಯುಳ್ಳ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಸ್ಥಾಪಿಸುತ್ತೇವೆ’ ಎಂದು ಆಸ್ಪತ್ರೆಯ ಸುಟ್ಟಗಾಯ ಚಿಕಿತ್ಸಾ ವಿಭಾಗದಮುಖ್ಯಸ್ಥ ಕೆ.ಟಿ ರಮೇಶ್ ತಿಳಿಸಿದರು.